ADVERTISEMENT

ವಿಜೃಂಭಣೆಯ ದಿವ್ಯಲಿಂಗೇಶ್ವರ ರಥೋತ್ಸವ

ಹರದನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 5:55 IST
Last Updated 10 ಮಾರ್ಚ್ 2018, 5:55 IST
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಇತಿಹಾಸ ಪ್ರಸಿದ್ಧ ಕಾಮಾಕ್ಷಾಂಬ ಸಮೇತ ದಿವ್ಯಲಿಂಗೇಶ್ವರ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಇತಿಹಾಸ ಪ್ರಸಿದ್ಧ ಕಾಮಾಕ್ಷಾಂಬ ಸಮೇತ ದಿವ್ಯಲಿಂಗೇಶ್ವರ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.   

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಇತಿಹಾಸ ಪ್ರಸಿದ್ಧ ಕಾಮಾಕ್ಷಾಂಬ ಸಮೇತ ದಿವ್ಯಲಿಂಗೇಶ್ವರ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥವು ಮಧ್ಯಾಹ್ನ 3 ಕ್ಕೆ ಸ್ವಸ್ಥಾನ ಸೇರಿತು. ರಥ ಸಂಚರಿಸಿದ ಮಾರ್ಗದುದ್ದಕ್ಕೂ ಭಕ್ತರಿಗೆ ಪಾನಕ, ಮಜ್ಜಿಗೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ರಥೋತ್ಸವಕ್ಕೂ ಮೊದಲು ಉತ್ಸವ ಮೂರ್ತಿಗೆ ದೇವಸ್ಥಾನದ ಸುತ್ತಲೂ ಇರುವ ಅರವಟಿಕೆಗಳಲ್ಲಿ ಪೂಜೆ ಸಲ್ಲಿಸಿ ರಥಾರೋಹಣ ಮಾಡಲಾಯಿತು. ಹುಲಿವೇಷಧಾರಿಗಳು, ನಂದಿಕಂಬ, ಕಂಸಾಳೆ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

ADVERTISEMENT

ರಥೋತ್ಸವಕ್ಕೆ ತಮಿಳುನಾಡಿನ ಸತ್ಯಮಂಗಲ, ಈರೋಡ್, ಸೇಲಂ, ಮೆಟ್ಟುಪಾಳ್ಯಂ, ಕೊಯಮತ್ತೂರು, ಚಾಮರಾಜ ನಗರ ತಾಲ್ಲೂಕಿನ ಹರದನಹಳ್ಳಿ, ಬಂಡಿಗೆರೆ, ವೆಂಕಟಯ್ಯನ ಛತ್ರ, ಅಂಕನಶೆಟ್ಟಿಪುರ, ಚಿಕ್ಕಹೊಳೆ, ಬಸವಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ದಾಹ ತಣಿಸಿದ ಮಜ್ಜಿಗೆ: ರಥೋತ್ಸವಕ್ಕೆ ಚಾಲನೆ ಸಿಗುವ ಮುನ್ನವೇ ವಿವಿಧ ಗ್ರಾಮಗಳ ಜನರು ಜಮಾಯಿಸಿದ್ದರು. ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರು ದಾಹ ತಣಿಸಿಕೊಳ್ಳಲು ಐಸ್‌ಕ್ರೀಮ್, ತಂಪುಪಾನೀಯ, ಕಲ್ಲಂಗಡಿ, ಸೌತೆಕಾಯಿಯ ಮೊರೆ ಹೋಗುತ್ತಿದ್ದರು. ವಿವಿಧೆಡೆ ಕೌಂಟರ್‌ ನಿರ್ಮಿಸಿ ದಾನಿಗಳು ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ಜತೆಗೆ, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ದಿವ್ಯಲಿಂಗೇಶ್ವರ ದೇವಸ್ಥಾನವು ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲಿದೆ. ರಥೋತ್ಸವದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್‌ ಬಿಗಿಬಂದೋಬಸ್ತ್‌ ಮಾಡಲಾಗಿತ್ತು.

ರಥೋತ್ಸವದ ಪ್ರಯುಕ್ತ ದಿವ್ಯಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನಿತ್ಯ ನಡೆಯುತ್ತಿದ್ದು, ಮಾರ್ಚ್‌ 12ರವರೆಗೆ ಪೂಜಾ ಕಾರ್ಯಕ್ರಮ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.