ADVERTISEMENT

ಶಿವನಸಮುದ್ರ: ಸ್ವಚ್ಛತೆ ದೂರ

ಡಿ.ವೆಂಕಟಾಚಲ
Published 1 ಜನವರಿ 2014, 8:33 IST
Last Updated 1 ಜನವರಿ 2014, 8:33 IST

ಕೊಳ್ಳೇಗಾಲ: ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ, ಚರಂಡಿಯಲ್ಲೇ ಮಡುಗಟ್ಟಿ ನಿಂತಿರುವ ಕಲುಷಿತ ನೀರು...

ಇದು ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ­ವಾಗಿರುವ ಶಿವನಸಮುದ್ರ ಗ್ರಾಮದ ಚಿತ್ರಣ. ಶಿವನಸಮುದ್ರ ಗ್ರಾಮದಲ್ಲಿ ಮಧ್ಯರಂಗನಾಥ ದೇವಾಲಯ, ಆದಿಶಕ್ತಿ ಮಾರಮ್ಮ ಹಾಗೂ ಶ್ರೀಚಕ್ರ ಹೊಂದಿರುವ ಪ್ರಸನ್ನ ಮೀನಾಕ್ಷಿ ದೇವಾಲಯಗಳಿದ್ದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ.

ಈ ಗ್ರಾಮದ ಜನತೆಗೆ ಮೂಲ ಸೌಲಭ್ಯಗಳನ್ನೇ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಿಲ್ಲ. ಈ ಗ್ರಾಮದ ಅನೇಕ ಬೀದಿಗಳಲ್ಲಿ ಚರಂಡಿಯನ್ನೇ ನಿರ್ಮಿಸದ ಕಾರಣ ರಸ್ತೆಯ ಮಧ್ಯದಲ್ಲೇ ತ್ಯಾಜ್ಯ ನೀರು ಹರಿಯುತ್ತಿದೆ. ಕೊಚ್ಚೆ ನೀರಿನಿಂದ ಸೊಳ್ಳೆ ಕಾಟವೂ ಹೆಚ್ಚಾಗಿ, ರೋಗ ರುಜಿನಗಳ ಭಯ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.

‘ಗ್ರಾಮದೊಳಗಿನ ರಸ್ತೆ ವ್ಯವಸ್ಥೆ ತೀರಾ ಹದಗೆಟ್ಟಿದೆ. ಮಳೆಗಾಲದಲ್ಲಿ ಈ ರಸ್ತೆಗಳು ಕೆಸರುಮಯವಾಗಿ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪ್ರಸಿದ್ಧ ಯಾತ್ರಾಸ್ಥಳವೆನಿಸಿರುವ ಈ ಗ್ರಾಮದ ಜನತೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ’ ಎಂಬುದು ಇಲ್ಲಿನ ನಾಗರಿಕರಾದ ಮುತ್ತುರಾಜು, ಮಂಟಿ ಅವರ ದೂರು.

ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಇಲ್ಲಿನ ಜನರ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಗ್ರಾಮದ ಮಗ್ಗುಲಲ್ಲೇ ಕಾವೇರಿ ಹರಿಯುತ್ತಿದ್ದರೂ ಈ ಜನರು ಮಾತ್ರ ನೀರಿಗೆ ಪರದಾಡುವ ಸ್ಥಿತಿ ಇದೆ.

ಗ್ರಾಮದಲ್ಲಿ ಚರಂಡಿ ನಿರ್ಮಿಸಿ ರಸ್ತೆ ಮೇಲೆ ಹರಿಯುವ ತ್ಯಾಜ್ಯ ನೀರು ತಪ್ಪಿಸಲು ಹಾಗೂ ಸಮರ್ಪಕ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.