ಚಾಮರಾಜನಗರ: ‘ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಸೇವೆ ಮಹತ್ವದ್ದಾಗಿದೆ’ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾ ಧೀಶ ಜಿ.ಬಸವರಾಜು ಹೇಳಿದರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪೊಲೀಸ್ ಸೇವೆ ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಕುಸಿದು ಅರಾಜಕಥೆ, ಅಶಾಂತಿ ಉಂಟಾಗುತ್ತದೆ. ಗುಂಪುಗಾರಿಕೆ, ಕೋಮುಗಲಭೆ ನಡೆದು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸ್ ಇಲಾಖೆ ಹೊರಬೇಕಿದೆ ಎಂದು ತಿಳಿಸಿದರು.
ಸಮಾಜದ ಸ್ವಾಸ್ಥ್ಯಕಾಪಾಡಲು ಪೊಲೀಸರು ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹೋರಾಡುವಂತಹ ಹಲವು ಸಂದರ್ಭಗಳು ಎದುರಾಗು ತ್ತದೆ. ಅಂತಹ ಸಂದರ್ಭದಲ್ಲಿ ಹಲವು ಪೊಲೀಸರು ಜೀವ ಕಳೆದುಕೊಂಡಿದ್ದಾರೆ. ಕೆಲವರು ಅಂಗವಿಕಲರಾಗಿದ್ದಾರೆ. ಅಂತಹವರಿಗೆ ಧ್ವಜ ದಿನಾಚರಣೆಯಂದು ಹಣ ಸಂಗ್ರಹಿಸಿ ಸಹಾಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪೊಲೀಸ್ ಧ್ವಜ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ‘ದೇಶದ ಗಡಿ ಭಾಗದಲ್ಲಿ ರಕ್ಷಣಾ ಇಲಾಖೆಗಳು ಕಾರ್ಯನಿರ್ವಹಿಸುವಂತೆ ದಿನದ 24 ಗಂಟೆ ಕಾಲವೂ ಪೊಲೀಸ್ ಇಲಾಖೆಯು ಕರ್ತವ್ಯ ನಿರ್ವಹಿಸುತ್ತದೆ. ಅವರ ಸೇವೆಯನ್ನು ಎಲ್ಲ ಇಲಾಖೆಗಳು ಹಾಗೂ ಸಾರ್ವನಿಕರು ಸ್ಮರಿಸಬೇಕು ಎಂದು ತಿಳಿಸಿದರು.ಶಾಂತಿಯುತವಾಗಿ ಜೀವನ ನಡೆಸಬೇಕಾದರೆ ಪೊಲೀಸ್ ಇಲಾಖೆ ಸಹಾಯ ಬಹಳ ಮುಖ್ಯ. ಧ್ವಜ ದಿನಾಚರಣೆಯಲ್ಲಿ ನಿವೃತ್ತ ನೌಕರರನ್ನು ಗೌರವಿಸುತ್ತಿರುವುದು ಅರ್ಥ ಪೂರ್ಣವಾಗಿದೆ. ಇಲಾಖೆಯ ಸಿಬ್ಬಂದಿ ಸರ್ಕಾರದಿಂದ ಪಡೆಯುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ ಹಾಜರಿದ್ದರು.
**
ನಿವೃತ್ತ ಪೊಲೀಸ್ ಸಿಬ್ಬಂದಿಗೆ ‘ಆರೋಗ್ಯ ಭಾಗ್ಯ’ ಯೋಜನೆಯಡಿ ವಿಶೇಷ ಸೌಲಭ್ಯ ಕಲ್ಪಿಸಬೇಕು – ಎಂ.ಪ್ರಭು, ನಿವೃತ್ತ ಆರ್ಎಸ್ಐ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.