ADVERTISEMENT

ಸರ್ಕಾರದ ಘೋಷಣೆಗಳು ಬರೀ ಕಾಗದದಲ್ಲಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 10:45 IST
Last Updated 2 ಜೂನ್ 2011, 10:45 IST

ಕೆ.ಆರ್.ನಗರ: `ಸರ್ಕಾರ ಹೇಳೋದೆಲ್ಲ ಮಾಡಿದ್ದರೆ ನಮ್ಮ ರಾಜ್ಯ ರಾಮರಾಜ್ಯವಾಗಿರುತ್ತಿತ್ತು~ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಕೃಷ್ಣ ಹೇಳಿದರು. ಪಟ್ಟಣದ ಪುರಸಭೆ ಬಯಲು ರಂಗಮಂದಿರದಲ್ಲಿ ಮಂಗಳವಾರ ಹಸಿರುನಾಡು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
             
ಇಂದು ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಪ್ರಶ್ನಿಸಿದರೆ ನಿಮ್ಮ ಕಾಲದಲ್ಲಿ ಮಾಡಿಲ್ಲವೇ ಎಂಬ ಉತ್ತರ ಬರುತ್ತದೆ.

ಭ್ರಷ್ಟಾಚಾರ ಇಂದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದು ನಾವೆಲ್ಲರೂ ಚಿಂತಿಸಬೇಕಾಗಿದೆ. ಸರ್ಕಾರದ ಘೋಷಣೆಗಳೆಲ್ಲವೂ ಇಂದು ಬರೀ ಕಾಗದದಲ್ಲಿ ಉಳಿದಿವೆ. ಅದನ್ನು ಹೊಗಲಾಡಿಸಲು ನಾವೆಲ್ಲರೂ ಹೊರಾಡಬೇಕಾಗಿದೆ ಎಂದರು.

ಪ್ರಾಧ್ಯಾಪಕ ಕೆ.ಸಿ.ಬಸವರಾಜು ಮಾತನಾಡಿ, ಭ್ರಷ್ಟಾಚಾರಿಗಳೇ ಭ್ರಷ್ಟಾಚಾರ ಹೋಗಲಾಡಿಸುವ ಬಗ್ಗೆ ಡೋಂಗಿತನದ ಮಾತುಗಳನ್ನಾ ಡುತ್ತಾರೆ. ಜನಪರ ಚಳವಳಿ ಇಂದು ಅವಶ್ಯಕವಾಗಿದೆ ಎಂದರು.

ಶಾಸಕ ಸಾ.ರಾ.ಮಹೇಶ್‌ಮಾತನಾಡಿ, ಭ್ರಷ್ಟಾಚಾರ ಇಂದು ಕೇವಲ ರಾಜಕೀಯದಲ್ಲಿ ಉಳಿದಿಲ್ಲ. ಅದು ಎಲ್ಲ ರಂಗಕ್ಕೂ ವ್ಯಾಪಿಸಿದೆ. ಅಧಿಕಾರಿಗಳ ಸಹಕಾರವಿಲ್ಲದೇ ಯಾವುದೇ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ತಾಲ್ಲೂಕು ಅಧ್ಯಕ್ಷ ಜಿ.ಪ್ರಕಾಶ್, ಬಿಜೆಪಿ ಮುಖಂಡ ಡಿ.ರವಿಶಂಕರ್, ಸಂಸ್ಥೆಯ ಸಂಘಟಕ ಹಳೇ ಮಿರ್ಲೆ ಸುನಯ್‌ಗೌಡ ಮಾತನಾಡಿದರು. ಸಾವಿತ್ರಮ್ಮ,  ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.