ಕೊಳ್ಳೇಗಾಲ: ಪರಿಸರ ಹಾಳು ಮಾಡಿ ಮೂರ್ಖರೆನಿಸದೆ ಪರಿಸರದ ಮಹತ್ವ ಅರಿತು ಪರಿಸರ ಸಂರಕ್ಷಿಸುವ ಕಡೆಗೆ ಜನತೆ ಹೆಚ್ಚಿನ ಒಲವು ತೋರಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ಹೇಳಿದರು.
ನಗರದ ಪತಂಜಲಿ ಯೋಗಮಂದಿರದಲ್ಲಿ ಜೆ.ಎಸ್.ಬಿ ಪ್ರತಿಷ್ಠಾನದ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿ ಅವರ 112ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಡನೆ ಕೊಳ್ಳೇಗಾಲ ಪಟ್ಟಣವನ್ನು ಗ್ರೀನ್ ಕೊಳ್ಳೇಗಾಳ ಮಾಡುವ ಹಿನ್ನೆಲೆಯಲ್ಲಿ ಏಪ್ರಿಲ್ ಫೂಲ್ ಎನ್ನುವ ಬದಲು ಯುವ ಸಮುದಾಯದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಏಪ್ರಿಲ್ ಕೂಲ್ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ರಕ್ತದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳಿಗೆ ಕಿವಿಗೊಡದೆ ರಕ್ತದಾನ ಪ್ರಯೋಜನಗಳ ಬಗ್ಗೆ ಅರಿವನ್ನು ಪಡೆದುಕೊಂಡು ಹೆಚ್ಚು ಹೆಚ್ಚು ರಕ್ತದಾನ ಮಾಡಲು ಜನರು ಮುಂದೆ ಬರಬೇಕು. ಡಾ.ಶಿವಕುಮಾರ ಸ್ವಾಮೀಜಿ ಅವರು ಸಹ ಪರಿಸರಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದ್ದರು. ಎಲ್ಲ ಯುವ ಜನರು ಅವರ ಆದರ್ಶ, ತತ್ವಗಳನ್ನು ಪಾಲಿಸಬೇಕು ಎಂದು ಹೇಳಿದರು.
ಚಾಮರಾಜನಗರ ರಕ್ತನಿಧಿ ಕೇಂದ್ರದ ಡಾ.ಸುಜಾತ ಅವರು ಮಾತನಾಡಿ, ‘ರಕ್ತದಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಅಲ್ಲದೆ, ಒಂದು ಅಮೂಲ್ಯ ಜೀವವನ್ನು ಉಳಿಸುವ ಶಕ್ತಿ ರಕ್ತಕ್ಕೆ ಇರುವುದರಿಂದ ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು’ ಎಂದು ಹೇಳಿದರು.
ಭಾರತ ವಿಕಾಸ ಪರಿಷತ್ ಅಧ್ಯಕ್ಷ ಡಿ.ವೆಂಕಟಾಚಲ ಮಾತನಾಡಿ, ‘ಯುವಪೀಳಿಗೆ ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ರಕ್ತದಾನ ಮಾಡಿದ ನಂತರ ಇತರರಿಗೂ ಈ ಬಗ್ಗೆ ಮಾಹಿತಿ ತಿಳಿಸಿ ಹೆಚ್ಚಿನ ಜನರು ರಕ್ತದಾನಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು
ಮುಖಂಡ ವೀರಭದ್ರಯ್ಯ, ಸುಂದ್ರಪ್ಪ, ಗುರುಸ್ವಾಮಿ, ಅ.ನಾಗರಾಜು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.