ADVERTISEMENT

‘ಗ್ರಾಮಾಭಿವೃದ್ಧಿಗೆ ಸಹಕಾರ ಸಂಘ ಅಗತ್ಯ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 9:26 IST
Last Updated 9 ಡಿಸೆಂಬರ್ 2013, 9:26 IST

ಚಾಮರಾಜನಗರ: ‘ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿದರೆ ಗ್ರಾಮಗಳು ಕೂಡ ಪ್ರಗತಿ ಕಾಣುತ್ತವೆ’ ಎಂದು ‘ಮೈಮುಲ್’ ನಿರ್ದೇಶಕಿ ವಿಮಲಾ ಜಯಶಂಕರ್  ಹೇಳಿದರು.

ತಾಲ್ಲೂಕಿನ ಪುಟ್ಟನಪುರದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಆರಂಭದಲ್ಲಿ 20 ಲೀಟರ್ ಹಾಲು ಶೇಖರಣೆಯಿಂದ ಸಂಘ ಪ್ರಾರಂಭವಾಯಿತು. ಈಗ ದಿನಕ್ಕೆ 450 ಲೀಟರ್ ಹಾಲು ಸಂಗ್ರಹಿಸುವ ಜತೆಗೆ ಗ್ರಾಮದ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ಅವರು ಹೇಳಿದರು.

ನೂತನ ತಂತ್ರಜ್ಞಾನಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಿಕೊಳ್ಳಬೇಕಿದೆ. ಹಾಲು ಶೇಖರಣೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ಪಾದಕರು ಹಾಗೂ ಸಂಘಕ್ಕೆ ಹೆಚ್ಚಿನ ಲಾಭ ಪಡೆಯುವ ಗುರಿ ಹೊಂದಬೇಕು ಎಂದರು.

ಗ್ರಾಮಕ್ಕೆ ಬಿಎಂಸಿ ಕೇಂದ್ರ ಮಂಜೂರಾಗುವ ಸಾಧ್ಯತೆಯಿದೆ. ಇದರಿಂದ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೊರೈಕೆ ಮಾಡಲು ಸಾಧ್ಯವಾಗಲಿದೆ. ಸಂಘದ ಅಧ್ಯಕ್ಷೆಯಾಗಿ ಹೆಚ್ಚಿನ ಪ್ರಗತಿ ಸಾಧಿಸಿರುವ ಜತೆಗೆ ಸ್ಥಳೀಯ ಜನಪ್ರತಿನಿಧಿಗಳ ಅನುದಾನವನ್ನು ಕ್ರೋಡೀಕರಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.

ಸಂಘದಿಂದ 20 ಮಂದಿ ಹಾಲು ಉತ್ಪಾದಕರಿಗೆ ಬ್ಯಾಂಕ್ ಮೂಲಕ ರಿಯಾಯಿತಿ ದರದಲ್ಲಿ ಹಸು ಖರೀದಿಸಲು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಉತ್ಪಾದಕರಿಗೆ ಬೋನಸ್ ನೀಡಲಾಗಿದೆ. ಗುಣಮಟ್ಟದ ಹಾಲು ನೀಡುವ ಉತ್ಪಾದಕರಿಗೆ ಲೀಟರ್‌ಗೆ ₨ 21 ದರ ನಿಗದಿಪಡಿಸಲಾಗಿದೆ. ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ರೇಚಂಬಳ್ಳಿ ಮಠದ ಮಹದೇವ ಸ್ವಾಮೀಜಿ, ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಣ್ಣ, ಗೌಡಿಕೆ ನಾಗರಾಜಪ್ಪ, ರಾಜಶೇಖರ್, ಒಕ್ಕೂಟದ ಪ್ರಭಾರ ಉಪ ವ್ಯವಸ್ಥಾಪಕ ಸದಾಶಿವಯ್ಯ, ವಿಸ್ತರಣಾಧಿಕಾರಿ ಆನಂದ್, ಸಂಘದ ನಿರ್ದೇಶಕಿಯರಾದ ಬಸಮ್ಮಣ್ಣಿ, ದಾಕ್ಷಯಣಿ, ಚಿನ್ನಮ್ಮ, ಪ್ರಭಾಮಣಿ, ಚಿನ್ನಮ್ಮ, ಕಾರ್ಯದರ್ಶಿ ಮಹದೇವಮ್ಮ, ಹಾಲು ಪರೀಕ್ಷಕಿ ರಾಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.