ADVERTISEMENT

‘ಬುದ್ಧ ತತ್ವದಲ್ಲಿ ಶಾಂತಿ ಅಡಗಿದೆ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:01 IST
Last Updated 4 ಡಿಸೆಂಬರ್ 2013, 8:01 IST

ಯಳಂದೂರು:  ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ. ಇಂದಿಗೆ ಶಾಂತಿ ಮಂತ್ರದ ಅನಿವಾರ್ಯತೆ ಹೆಚ್ಚಾಗಿದೆ. ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ ಬುದ್ಧನ ತತ್ವಾದರ್ಶಗಳನ್ನು ಪಾಲಿಸುವುದರಿಂದ ಸುಖ, ಶಾಂತಿ ನೆಮ್ಮದಿಯನ್ನು ಕಾಣಬಹುದಾಗಿದ್ದು, ಈ ಬಗ್ಗೆ ಸಮಾಜ ಚಿಂತಿಸುವ ಅಗತ್ಯತೆ ಇದೆ ಎಂದು ಧಮ್ಮಪಾಲ ಬಂತೇಜಿ ತಿಳಿಸಿದರು.

ತಾಲ್ಲೂಕಿನ ಶಿವಕಹಳ್ಳಿ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಪಂಚಶೀಲ ರಥ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕುಡಿತ, ವ್ಯಭಿಚಾರದಂತಹ ಚಟಗಳನ್ನು ಬಿಡಬೇಕು. ಜೀವನದಲ್ಲಿ ಪಂಚಶೀಲ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿದಾಗ 8ರಿಂದ 10 ಲಕ್ಷ ಜನರು ಈ ಧರ್ಮ ಸ್ವೀಕರಿಸಿದರು ಎಂದು ಅವರು ಹೇಳಿದರು.

ಅನುಯಾಯಿಗಳಾದ ನಾವೂ ಕೂಡ ಈ ಧರ್ಮದಲ್ಲಿರುವ ತತ್ವಾದರ್ಶ ಪಾಲಿಸಬೇಕು. ಆ ಮೂಲಕ ಅವರ ಹಾದಿಯಲ್ಲೇ ಸಾಗಬೇಕಾದ ಅನಿವಾರ್ಯತೆ ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿದ್ದು, ಈ ಬಗ್ಗೆ ಹೆಚ್ಚಿನ ಚಿಂತನೆಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಗ್ರಾಮದಲ್ಲಿ ಪ್ರತಿ ಮನೆಯ ಮುಂಭಾಗದಲ್ಲೂ ರಂಗೋಲಿ ಹಾಕಿ ಹೂವು ಚೆಲ್ಲಿ, ಮಹಿಳೆಯರು ಆರತಿ ಬೆಳಗುವ  ಮೂಲಕ ರಥಕ್ಕೆ ಸಂಭ್ರಮದ ಸ್ವಾಗತ ಕೋರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ  ಡಿ. ವೆಂಕಟಾಚಲ, ಅಂಬೇಡ್ಕರ್‌ ಸೇವಾ ಸಮಿತಿ ಅಧ್ಯಕ್ಷ ರೇವಣ್ಣ, ಯರಿಯೂರು ರಾಜಣ್ಣ, ಮದ್ದೂರು ಚಕ್ರವರ್ತಿ, ರಂಗದೇಗುಲ ಶಾಂತರಾಜು, ಕೆಸ್ತೂರು ನಾಗರಾಜು, ರಜಿನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.