ಚಾಮರಾಜನಗರ: ಹನೂರು ಪಟ್ಟಣದಲ್ಲಿ ಮಾರ್ಚ್ 24 ಮತ್ತು 25ರಂದು ಅದ್ದೂರಿಯಾಗಿ ಗಡಿನಾಡು ಕನ್ನಡಿಗರ ಸಂಸ್ಕೃತಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ನಗರದ ದೀನಬಂಧು ಸಂಸ್ಥೆಯಲ್ಲಿ ಬುಧವಾರ ಉತ್ಸವ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ಉತ್ಸವದ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.
ಗಡಿ ಜಿಲ್ಲೆ ಬಗ್ಗೆ ಆಳುವ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು ಬರಲು ಹಿಂದೇಟು ಹಾಕುತ್ತಾರೆ. ನಂಜುಂಡಪ್ಪ ವರದಿಯನ್ವಯ ಜಿಲ್ಲೆ ಕೂಡ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371ನೇ ವಿಧಿಯಡಿ ವಿಶೇಷ ಸ್ಥಾನಮಾನ ಕಲ್ಪಿಸುವ ಬಗ್ಗೆ ಹೋರಾಟ ನಡೆಯುತ್ತಿದೆ. ಗಡಿ ಜಿಲ್ಲೆಗೂ ಈ ಸ್ಥಾನಮಾನ ಕಲ್ಪಿಸುವ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವ ಬಗ್ಗೆ ಮುಖಂಡರು ಸಲಹೆ ಮುಂದಿಟ್ಟರು.
ತಾಳವಾಡಿ ಫಿರ್ಕಾದಲ್ಲಿ ಸಾವಿರಾರು ಕನ್ನಡಿಗರಿದ್ದಾರೆ. ಇಂದಿಗೂ ಅವರಿಗೆ ಸೌಲಭ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಸ್ಥಿತಿಗತಿ ಬಗ್ಗೆ ಉತ್ಸವದಲ್ಲಿ ವಿಚಾರ ಗೋಷ್ಠಿ ನಡೆಸಲು ನಿರ್ಣಯಿಸಲಾಯಿತು. ಹೊಗೇನಕಲ್ ಸಮಸ್ಯೆ ಸೇರಿದಂತೆ ಗಡಿನಾಡು ಕನ್ನಡಿಗರು ಎದುರಿಸುತ್ತಿರುವ ಹಲವು ಸಮಸ್ಯೆ ಬಗ್ಗೆ ಉತ್ಸವದ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಫಲಶ್ರುತಿ ಸಿಗದಿದ್ದರೆ ಹೋರಾಟದ ಆಂದೋಲನ ರೂಪಿಸುವ ಬಗ್ಗೆ ಅಭಿಪ್ರಾಯ ಪಡಿಮೂಡಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಿ.ಎಸ್. ಜಯದೇವ, ಹಿರಿಯ ರಂಗಕರ್ಮಿ ಕೆ. ವೆಂಕಟರಾಜು, ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ, ಕನ್ನಡಪರ ಸಂಘಟನೆಗಳ ಮುಖಂಡರಾದ ಶಾ.ಮುರಳಿ, ಗೋವಿಂದರಾಜು, ಚಾ.ರಂ. ಶ್ರೀನಿವಾಸಗೌಡ, ಎ.ಎಂ. ಮಹೇಶ್ಪ್ರಭು ಇತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.