ADVERTISEMENT

ಶಿಕ್ಷಕರ ಅಮಾನತಿಗೆ ಒತ್ತಾಯ

ಮಕ್ಕಳಿಗೆ ಗೋಹತ್ಯೆ ನಿಷೇಧದ ಅರ್ಜಿ ವಿತರಣೆ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 12:47 IST
Last Updated 4 ಜನವರಿ 2018, 12:47 IST

ಯಳಂದೂರು: ಗೋಹತ್ಯೆ ನಿಷೇಧ ಮಾಡುವಂತೆ ಮಕ್ಕಳಿಗೆ ಅರ್ಜಿಗಳನ್ನು ವಿತರಿಸಿ ಒತ್ತಾಯ ಪೂರ್ವಕವಾಗಿ ಪೋಷಕರಿಂದ ಸಹಿ ಪಡೆಯಲು ಮುಂದಾಗಿರುವ ಶಿಕ್ಷಕರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ದಸಂಸ ಜಿಲ್ಲಾ ಘಟಕದ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ, ‘ತಾಲ್ಲೂಕಿನ ಆದರ್ಶ ವಿದ್ಯಾಲಯ ಹಾಗೂ ಯಳಂದೂರು ಪಟ್ಟಣದ ಲಯನ್ಸ್ ಶಾಲೆಗಳಲ್ಲಿ ಈಚೆಗೆ ಗೋಹತ್ಯೆ ನಿಷೇಧ ಸಂಬಂಧ ವಿದ್ಯಾರ್ಥಿಗಳಿಗೆ ಅರ್ಜಿ ವಿತರಿಸಲಾಗಿತ್ತು. ಪೋಷಕರಿಂದ ಬಲವಂತವಾಗಿ ಅರ್ಜಿಗೆ ಸಹಿ ಪಡೆಯಲು ತಿಳಿಸಲಾಗಿತ್ತು. ಇದು ಸಂವಿಧಾನದ ಆಹಾರ ಹಕ್ಕಿನ ಉಲ್ಲಂಘನೆಯ ಭಾಗವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಾರದೆ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದು ದೂರಿದರು.

‘ಗೋಹತ್ಯೆ ವಿಷಯದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಸಂಘ ಪರಿವಾರದ ಯೋಜನೆಗಳನ್ನು ಜಾರಿಗೆ ತರುವ ಮನಸ್ಥಿತಿಯವರು ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಭಾಗಿಯಾಗಿರುವ ಶಂಕೆ ಇದೆ. ಆದರ್ಶ ಶಾಲೆಯಲ್ಲಿ ಬಿಇಒ ಖುದ್ದಾಗಿ ಹಾಜರಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಪಟ್ಟಣದ ಲಯನ್ಸ್ ಶಾಲೆಯಲ್ಲಿ ಬಿಆರ್‌ಪಿ ಮತ್ತು ಸಿಆರ್‌ಪಿ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆ. ತಪ್ಪಿತಸ್ಥ ಶಿಕ್ಷಕರನ್ನು ಅಮಾನತಿನಲ್ಲಿ ಇಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಉಪ ನಿರ್ದೇಶಕ ಕೆ. ಮಹಾದೇವಪ್ಪ ಸ್ಥಳಕ್ಕೆ ಭೇಟಿ ನೀಡಿ, ‘ಬಿಇಒ ಅವರಿಂದ ವರದಿ ಪಡೆದು 2 ದಿನಗಳ ಒಳಗೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಹಶೀಲ್ದಾರ್ ಕೆ.ಚಂದ್ರಮೌಳಿ, ಬಿಇಒ ಮಲ್ಲಿಕಾರ್ಜುನ, ಉಪನಿರ್ದೆ ಶಕರ ಕಚೇರಿಯ ವಿಷಯ ಪರಿವೀಕ್ಷಕ ಮಹದೇವ, ತಾಪಂ ಸದಸ್ಯ ವೈ.ಕೆ. ಮೋಳೆ ನಾಗರಾಜು, ಸಮತಾ ಸೈನಿಕ ದಳದ ಸಂಘಸೇನಾ, ಕೆ.ಎಂ. ನಾಗರಾಜು, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ, ಚಕ್ರವರ್ತಿ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಮುಖಂಡ ಪಿ.ಮಾದೇಶ್, ಚಂದ್ರಶೇಖರ್, ಕೃಷ್ಣಮೂರ್ತಿ, ಸಿದ್ದರಾಜು, ಮದ್ದೂರು ಅನಂತ್, ಸ್ವಾಮಿ ಕೊಮಾರನಪುರ, ದುಗ್ಗಹಟ್ಟಿ ಮಾದೇಶ್, ಸೋಮಣ್ಣ, ರಾಮಪುರ ರಂಗಸ್ವಾಮಿ, ಕಾಳಿಪ್ರಸಾದ್, ಲಿಂಗರಾಜು, ಮಂಜು ನಾಥ್, ಮಲ್ಲರಾಜು, ಶಂಕರಮೂರ್ತಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.