ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ರಂಗನಾಥನ ಬಾಲಾಲಯ, ಪಟ್ಟಣದ ಗೌರೇಶ್ವರ, ಭೂಲಕ್ಷ್ಮಿ ವರಾಹಸ್ವಾಮಿ ದೇಗುಲ ಸೇರಿದಂತೆ ಬಹುತೇಕ ದೇವಸ್ಥಾನಗಳ ಬಾಗಿಲುಗಳನ್ನು ಬುಧವಾರ ಚಂದ್ರಗ್ರಹಣ ನಿಮಿತ್ತ ಬಂದ್ ಮಾಡಲಾಗಿತ್ತು.
152 ವರ್ಷಗಳ ನಂತರ ಈ ಗ್ರಹ ಸಂಭವಿಸುತ್ತಿದ್ದು, ಹುಣ್ಣಿಮೆಯೂ ಇಂದೇ ಇರುವುದರಿಂದ ಮಧ್ಯಾಹ್ನ 2 ಗಂಟೆಯ ನಂತರ ದೇವರಿಗೆ ಪೂಜೆ ಸಲ್ಲಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಅರ್ಚಕರೊಬ್ಬರು ತಿಳಿಸಿದರು.
‘ಸಂಜೆ 05.17ಕ್ಕೆ ಗ್ರಹಣ ಪ್ರಾರಂಭವಾಗಿ ರಾತ್ರಿ 08.42ಕ್ಕೆ ಮುಗಿಯಲಿದೆ. ಹಾಗಾಗಿ, ಮಧ್ಯಾಹ್ನವೇ ದೇವಾಲಯವನ್ನು ಮುಚ್ಚಲಾಗಿದೆ. ಗ್ರಹಣ ಮುಗಿದ ಬಳಿಕ ರಾತ್ರಿ ಕಲ್ಯಾಣಿ ಕೊಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಪವಿತ್ರ ತೀರ್ಥವನ್ನು ದೇವಾಲಯದ ಗರ್ಭಗುಡಿಯ ಸುತ್ತಮುತ್ತ ಸಂಪ್ರೋಕ್ಷಣೆ ಮಾಡಲಾಗುವುದು. ವಿಶೇಷ ಪೂಜೆಯ ನಂತರ ದೇವಾಲಯವನ್ನು ಶುದ್ಧ ಮಾಡಲಾಗುತ್ತದೆ’ ಎಂದು ದೇವಾಲಯ ಆಡಳಿತಾಧಿಕಾರಿ ಮಾಹಿತಿ ನೀಡಿದರು.
ತಾಲೂಕಿನ ವಿವಿಧ ದೇವಾಲಯಗಳೂ ಬಂದ್: ಪಟ್ಟಣದ ಭೂ ಲಕ್ಷ್ಮೀ ವರಹಸ್ವಾಮಿ, ಗೌರೇಶ್ವರ, ಆಂಜನೇಯ, ಮಾರಮ್ಮ, ಸೇರಿದಂತೆ ತಾಲ್ಲೂಕಿನ ಅಗರ ಗ್ರಾಮದ ಲಕ್ಷ್ಮೀ ನರಸಿಂಹಸ್ವಾಮಿ, ಕಂದಹಳ್ಳಿ ಮಹದೇಶ್ವರ, ಮದ್ದೂರು ಗ್ರಾಮದ ಲಕ್ಷ್ಮೀ, ವಡಗೆರೆಯ ಬಿದ್ದಾಂಜನೇಯಸ್ವಾಮಿ ದೇವಾಲಯಗಳಲ್ಲೂ ಚಂದ್ರಗ್ರಹಣ ನಿಮಿತ್ತ ಭಕ್ತರಿಗೆ ದರ್ಶನ ಭಾಗ್ಯವಿರಲಿಲ್ಲ.
ಭಕ್ತರಿಗೆ ನಿರಾಸೆ : ಬಿಳಿಗಿರಿರಂಗನಬೆಟ್ಟ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳ ಬಾಗಿಲು ಹಾಕುವ ವಿಷಯ ಅರಿಯದೇ ದೇವಾಲಯಗಳಿಗೆ ಭೇಟಿ ನೀಡಿದ್ದ ಪ್ರವಾಸಿಗರು, ಭಕ್ತರು ನಿರಾಸೆಯಿಂದ ಹಿಂದಿರುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.