ADVERTISEMENT

ಕೊಳ್ಳೇಗಾಲ | ಕಬ್ಬಿನ ಲಾರಿಗೆ ತಗುಲಿದ ವಿದ್ಯುತ್ ತಂತಿ; ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 10:06 IST
Last Updated 9 ಸೆಪ್ಟೆಂಬರ್ 2023, 10:06 IST
   

ಕೊಳ್ಳೇಗಾಲ (ಚಾಮರಾಜನಗರ): ತಾಲ್ಲೂಕಿನ ಗುಂಡಾಲ್ ಜಲಾಶಯದ ಮುಖ್ಯ ರಸ್ತೆಯಲ್ಲಿ ಶನಿವಾರ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಮಾಲೀಕ ಮತ್ತು ಚಾಲಕ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಂಗರಪುರ ಗ್ರಾಮದ ಲಾರಿ ಮಾಲೀಕ ಪ್ರಕಾಶ್ (45) ಮತ್ತು ಚಾಲಕ ಮಹದೇವಸ್ವಾಮಿ (35) ಮೃತಪಟ್ಟವರು.

ಗುಂಡಾಲ್ ಜಲಾಶಯದ ಮುಖ್ಯ ರಸ್ತೆಯಲ್ಲಿ ಇರುವ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಕಟಾವು ಮಾಡಿದ ಕಬ್ಬನ್ನು ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದ ಕಬ್ಬಿನ ಕಾರ್ಖಾನೆಗೆ ತುಂಬಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದೆ.

ADVERTISEMENT

‘ವಿದ್ಯುತ್ ತಂತಿ ತಗುಲಿದ ತಕ್ಷಣ ಲಾರಿ ಮಾಲೀಕ ಪ್ರಕಾಶ್ ಲಾರಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಜಿಗಿದ ತಕ್ಷಣ ವಿದ್ಯುತ್ ತಗುಲಿದೆ. ಇವರನ್ನು ಬಿಡಿಸಲು ಹೋದ ಚಾಲಕ ಮಹದೇವಸ್ವಾಮಿ ಅವರಿಗೂ ವಿದ್ಯುತ್ ತಗುಲಿದೆ. ತಕ್ಷಣ ಇಬ್ಬರೂ ಸ್ಥಳದಲ್ಲಿ ಅಸುನೀಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.