ಚಾಮರಾಜನಗರ: ಪೌತಿ ಖಾತೆಗೆ ಹೆಸರು ಸೇರ್ಪಡೆಗೊಳಿಸಲು ₹8,000 ಲಂಚ ಕೇಳಿದ ತಾಲ್ಲೂಕಿನ ಚಂದಕವಾಡಿ ಗ್ರಾಮ ಪಂಚಾಯಿತಿಯ ಗ್ರಾಮಲೆಕ್ಕಿಗ (ವಿಎ) ಮಹೇಶ್ಕುಮಾರ್ ಅವರು ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ದೂರುದಾರರಿಂದ ₹5,500 ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹಣವನ್ನು ವಶಕ್ಕೆ ಪಡೆದು, ಅವರನ್ನು ಬಂಧಿಸಲಾಗಿದೆ.
ಘಟನೆಯ ವಿವರ: ತಾಲ್ಲೂಕಿನ ಮೂಕನಪಾಳ್ಯ ಗ್ರಾಮದ ದೂರದಾರರ (ಪೊಲೀಸರು ಹೆಸರು ಬಹಿರಂಗ ಪಡಿಸಿಲ್ಲ) ತಂದೆಯ ಹೆಸರಿನಲ್ಲಿ ಇದ್ದ ಜಮೀನಿನ ಪೌತಿ ಖಾತೆಯಲ್ಲಿ ಕುಟುಂಬದವರ ಹೆಸರು ಸೇರಿಸಲು ಒಂದೂವರೆ ತಿಂಗಳ ಚಂದಕವಾಡಿ ಉಪತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪೌತಿ ಖಾತೆಗೆ ಹೆಸರು ಸೇರ್ಪಡೆಗೊಳಿಸುವಾಗ ದೂರುದಾರರ ಹೆಸರು ಬಿಟ್ಟು ಹೋಗಿತ್ತು. ಅವರ ಹೆಸರನ್ನು ಸೇರಿಸಲು ಗ್ರಾಮ ಲೆಕ್ಕಿಗ ಮಹೇಶ್ ಕುಮಾರ್ ಅವರು ₹8,000 ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.
ಫೆ.18ರಂದು ದೂರುದಾರ ಮುಂಗಡವಾಗಿ ₹2,500 ನೀಡಿದ್ದರು. ಉಳಿದ ₹5,500 ನೀಡುವುದಕ್ಕೂ ಮೊದಲು ಸೋಮವಾರ ಬೆಳಿಗ್ಗೆ ಆನ್ಲೈನ್ ಮೂಲಕ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹೇಶ್ ಕುಮಾರ್ ಅವರು ₹5,500 ಲಂಚ ಪಡೆಯುತ್ತಿದ್ದಾಗ ಅವರನ್ನು ಬಂಧಿಸಿದ್ದಾರೆ ಪಡೆದಿದ್ದಾರೆ. ಹಣವನ್ನು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಸದಾನಂದ ಎ.ತಿಪ್ಪಣ್ಣವರ್, ಇನ್ಸ್ಪೆಕ್ಟರ್ಗಳಾದ ಕಿರಣ್ ಕುಮಾರ್, ಎಲ್.ದೀಪಕ್ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.