
ಯಳಂದೂರು: ಪ್ರಸಿದ್ಧ ಬಿಳಿಗಿರಿಬೆಟ್ಟದ ಪೋಡುಗಳ ಸುತ್ತಮುತ್ತ ಮದ್ಯ ಮಾರಾಟ ಹೆಚ್ಚಾಗಿದೆ. ಶಾಲೆಗಳ ಬಳಿ ಸಂಜೆ ಮದ್ಯ ಸೇವಿಸಿ ಬಾಟಲ್ ಹಾಗೂ ಆಹಾರ ತ್ಯಾಜ್ಯ ಬಿಸಾಡುತ್ತಾರೆ. ಶಾಲೆಗಳು ಸುತ್ತುಗೋಡೆ, ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಮಕ್ಕಳು ಗ್ರಾಮ ಸಭೆಯಲ್ಲಿ ದೂರಿದರು.
ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಹತ್ತಾರು ಸಮಸ್ಯೆಗಳನ್ನು ಮುಖಂಡರ ಎದುರಿನಲ್ಲಿ ಬಿಚ್ಚಿಟ್ಟರು.
ಯರಕನಗದ್ದೆ, ಬಿಳಿಗಿರಿಬೆಟ್ಟ ಗ್ರಾಮ ಶಾಲೆಗಳಲ್ಲಿ ಸೋಲಿಗ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗರ ಚಿಣ್ಣರು ಕಲಿಯುತ್ತಿದ್ದಾರೆ. ಕಲ್ಯಾಣಿಪೋಡು ದಾರಿ ಪೊದೆಗಳಿಂದ ಆವೃತವಾಗಿದ್ದು, ಶಾಲೆಗೆ ತೆರಳುವುದು ಸಮಸ್ಯೆಯಾಗಿದೆ. ವನ್ಯ ಜೀವಿಗಳ ಆತಂಕ ಹಾಗೂ ಅಲ್ಲಲ್ಲಿ ಮದ್ಯಪಾನಿಗಳ ಸಂಚಾರದಿಂದ ಮಕ್ಕಳು ಪರಿತಪಿಸಬೇಕು ಎಂದು ಪೋಷಕರು ಆರೋಪಿಸಿದರು.
ನೋಡಲ್ ಅಧಿಕಾರಿ ಬೊಮ್ಮಯ್ಯ ಮಾತನಾಡಿ, ‘ಮಕ್ಕಳ ಕಲಿಕಾ ವಾತಾವರಣವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು. ಶೌಚಾಲಯ ಹಾಗೂ ಕೊಠಡಿಗಳನ್ನು ಶುದ್ಧವಾಗಿ ಕಾಪಾಡಿಕೊಳ್ಳುವಲ್ಲಿ ಪೋಷಕರ ಪಾತ್ರವೂ ಇದೆ. ಸುತ್ತುಗೋಡೆ ನಿರ್ಮಾಣಕ್ಕೆ ಪಂಚಾಯಿತಿ ಮೂಲಕ ನೆರವು ಕಲ್ಪಿಸಲು ಮನವಿ ಸಲ್ಲಿಸಲಾಗುವುದು’ ಎಂದರು.
ಪಿಡಿಒ ಶಶಿಕಲಾ, ಪಂಚಾಯಿತಿ ಅಧ್ಯಕ್ಷ ಸಿಡಿ ಮಾದೇವ, ಸದಸ್ಯ ಪ್ರತೀಪ್ ಕುಮಾರ್, ಉಪಾಧ್ಯಕ್ಷೆ ಕಮಲಮ್ಮ, ಸಾಕಮ್ಮ, ಬಸವಣ್ಣ, ರಂಗಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.