ಚಾಮರಾಜನಗರ: ಜನವರಿ ತಿಂಗಳ ಒಳಗಾಗಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್ ಅವರು ಹೇಳಿದರು.
ಕೆರೆ ನೀರು ತುಂಬಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಶಾಸಕರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀರು ಹರಿಸಲು ಇನ್ನೂ 77 ದಿನಗಳ ಅವಕಾಶ ಇದೆ. ಎರಡು ಮೋಟಾರ್ಗಳು ಕೆಟ್ಟುಹೋಗಿದ್ದರಿಂದ ಸ್ವಲ್ಪ ಸಮಸ್ಯೆ ಆಗಿತ್ತು. ಈಗ ಅದು ಬಗೆಹರಿದಿದೆ’ ಎಂದರು.
ಮೂರನೇ ಹಂತದ ಯೋಜನೆಯ ಕೆರೆಗಳನ್ನು ಬಿಟ್ಟು ನಾಲ್ಕನೇ ಹಂತದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ, ಬಿಜೆಪಿ ಶಾಸಕರ ಕ್ಷೇತ್ರದ ಕೆರೆಗಳಿಗೆ ಮಾತ್ರ ನೀರು ಹರಿಯುತ್ತಿದೆ ಎಂಬ ಆರೋಪಗಳ ಬಗ್ಗೆ ಕೇಳಿದ್ದಕ್ಕೆ, ‘ಕುಡಿಯುವ ನೀರಿನ ಉದ್ದೇಶಕ್ಕೆ ಕೆರೆಗಳಿಗೆ ನೀರು ತುಂಬಿಸುವುಕ್ಕೆ ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ. ನಿಯಮದ ಪ್ರಕಾರವೇ ಕೆರೆಗಳಿಗೆ ನೀರು ಹರಿಸಲಾಗುವುದು’ ಎಂದು ಅವರು ಉತ್ತರಿಸಿದರು.
‘ಮೊದಲ ಮತ್ತು ಎರಡನೇ ಹಂತದ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಈ ತಿಂಗಳಾಂತ್ಯದಲ್ಲಿ ತುಂಬಲಿವೆ. ಉಳಿದ ಎರಡು ಹಂತದ ಯೋಜನೆಗಳ ಕೆರೆಗಳಿಗೆ ನಂತರ ತುಂಬಿಸಲಾಗುವುದು. ಜನವರಿ ಒಳಗೆ ಎಲ್ಲ ಕೆರೆಗಳು ಭರ್ತಿಯಾಗಲಿವೆ’ ಎಂದು ಸುರೇಶ್ ಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.