
ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಭೀಮನಗರದ ಕುಲಸ್ಥರು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘದ ವತಿಯಿಂದ ಶನಿವಾರ ರಾತ್ರಿ ಮೊಂಬತ್ತಿ ಮೆರವಣಿಗೆ ನಡೆಯಿತು.
ನಗರದ ಭೀಮ ನಗರದ ಚೌಡಮ್ಮನ ಗುಡಿ ಬೀದಿಯಿಂದ ಹೊರಟ ಅಂಬೇಡ್ಕರ್ ಸ್ಮಾರಕ ಸಂಘದವರು, ಭೀಮ ನಗರದ ಕುಲಸ್ತರು, ಶಾಲಾ, ಕಾಲೇಜು ಮಕ್ಕಳು, ಯುವಕರು, ವೃದ್ಧರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿನಿಯರು ಸಾಮಂದಿಗೇರಿ ಬೀದಿ, ಕನ್ನಿಕ ಪರಮೇಶ್ವರಿ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯ ಮೂಲಕ ಸಾಗಿ ಬಂದು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ದಾರಿ ಉದ್ದಕ್ಕೂ ಬುದ್ಧಂ ಶರಣಂ ಗಚ್ಛಾಮಿ ಹಾಗೂ ಅಂಬೇಡ್ಕರ್ ಗೀತೆಗಳು ಹಾಡುತ್ತಾ ಬಂದರು.
ನಂತರ ಭೀಮನಗರದ ಮುಖಂಡ ಚಿಕ್ಕಮಾಳಿಗೆ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಅವರು ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ನಿವಾರಣೆ, ಸಮ ಸಮಾಜಕ್ಕಾಗಿ ಶ್ರಮಿಸಿದವರು. ದೇಶದ ಏಳಿಗೆಗಾಗಿ ಅವರು ಕೊಟ್ಟ ಕೊಡುಗೆ ಅನನ್ಯ. ಪ್ರಪಂಚ ಕಂಡ ಪ್ರತಿಭಾವಂತ ಅರ್ಥಶಾಸ್ತ್ರಜ್ಞರಾಗಿರುವ ಅವರು ಮಹಿಳಾ ಸಮಾನತೆ ಸ್ವಾತಂತ್ರಕ್ಕಾಗಿ ಶ್ರಮಿಸಿದರು. ದೇಶಕ್ಕೆ ಸಶಕ್ತ ಸಂವಿಧಾನ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂರ್ತರೂಪ ನೀಡಿದರು ಎಂದರು.
ವಿಶ್ವದಲ್ಲೇ ಮಾದರಿಯಾಗಿರುವ ಸಂವಿಧಾನ ಸಮಾನತೆ, ಸಹೋದರತೆ, ಸೌಹಾರ್ದತೆ ಸಾರುತ್ತದೆ. ಅವರು ತೋರಿದ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಬೇಕಾಗಿದೆ. ಇಂದು ಬಹಳ ದುಃಖ ದಿನ ಎಂದು ಹೇಳಲು ತಪ್ಪಾಗಲಾರದು. ಹಾಗಾಗಿ ಪ್ರತಿಯೊಬ್ಬರೂ ಸಹ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವ ಮೂಲಕ ಅವರ ಹಾದಿಯಲ್ಲಿ ನಡೆಯಬೇಕು ಎಂದರು.
ಮೊಂಬತ್ತಿ ಮೆರವಣಿಗೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಮಾಜಿ ನಗರಸಭೆ ಅಧ್ಯಕ್ಷೆ ರೇಖಾ, ಎಸ್.ರಮೇಶ್, ಮುಖಂಡ ನಟರಾಜು, ವರದರಾಜು, ಸಿದ್ದಪ್ಪಾಜಿ, ಬೆಂಜಮಿನ್, ತೇಜು, ವಕೀಲ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜು, ವಕೀಲ ಮೋಹನ್, ಹರೀಶ್, ದಿಲೀಪ್ ಸೇರಿದಂತೆ ನೂರಾರು ಮಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.