ADVERTISEMENT

ಆಟೊ ಪಲ್ಟಿಯಾಗಿ ಚಾಲಕ ಸಾವು; ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 16:03 IST
Last Updated 7 ಫೆಬ್ರುವರಿ 2021, 16:03 IST
ಮಂಜುನಾಥ್‌
ಮಂಜುನಾಥ್‌   

ಚಾಮರಾಜನಗರ: ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಗ್ರಾಮಾಂತರ ಪೊಲೀಸ್‌ ಠಾಣೆ ಎದುರಿನ ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ಭಾನುವಾರ ಸಂಜೆ ಆಟೊವೊಂದು ಪಲ್ಟಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರಸಭೆಯ ನಿರ್ಲಕ್ಷದಿಂದಲೇ ಈ ಅಪಘಾತ ಸಂಭವಿಸಿದೆಎಂದು ಆಕ್ರೋಶ ವ್ಯಕ್ತಪಡಿಸಿ ಚಾಲಕನ ಕುಟುಂಬದವರು ಹಾಗೂ ನೆರಹೊರೆಯವರು ಜಿಲ್ಲಾಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.

ನಗರದ ಕೆಳಗಡೆ ನಾಯಕರ ಬೀದಿಯ ನಿವಾಸಿ ಮಂಜುನಾಥ್‌ (38) ಮೃತಪಟ್ಟ ಆಟೊ ಚಾಲಕ.

ADVERTISEMENT

ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಸ್ವಲ್ಪ ಕೆಲಸ ಮುಗಿದಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯ ಎದುರು ಚರಂಡಿ ನಿರ್ಮಾಣಕ್ಕಾಗಿ ಹಳ್ಳ ತೆಗೆಯಲಾಗಿದೆ.ಭಾನುವಾರ ಸಂಜೆ ಮಂಜುನಾಥ್‌ ಅವರು ಚಲಾಯಿಸುತ್ತಿದ್ದ ಆಟೊ ಪಲ್ಟಿ ಹೊಡೆದು ಹಳ್ಳಕ್ಕೆ ಬಿದ್ದಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಸ್ತೆ ಕಾಮಗಾರಿ ವಿಳಂಬವಾಗಿದೆ, ನಗರಸಭೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿರುವ ಕೆಳಗಡೆ ಬೀದಿಯ ನಿವಾಸಿಗಳು ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.

‘ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಮೃತರ ಕುಟುಂಬಕ್ಕೆ ಪರಿಹಾರಕೊಡಬೇಕು’ ಎಂದು ಪಟ್ಟು ಹಿಡಿದಿರುವ ಪ್ರತಿಭಟನಕಾರರು, ರಾತ್ರಿ ಒಂಬತ್ತು ಗಂಟೆಯಾದರೂ ಸ್ಥಳದಿಂದ ಕದಲಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.