ADVERTISEMENT

ಚಾಮರಾಜನಗರ: 6 ಕೆ.ಜಿ ಗೊನೆಗೂ ಮೊದಲ ದರ್ಜೆ ದರ ಕೊಡಿ

ಎರಡನೇ ದರ್ಜೆಯ ಬಾಳೆಗೊನೆಗೆ ಶೇ 50ರ ಬದಲು ಶೇ 60 ಬೆಲೆ ನಿಗದಿಗೊಳಿಸಿ: ವರ್ತಕರಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:11 IST
Last Updated 29 ಆಗಸ್ಟ್ 2025, 2:11 IST
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಬಾಳೆ ಬೆಳೆಗಾರರು ಹಾಗೂ ವರ್ತಕರ ಸಭೆ ನಡೆಯಿತು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಬಾಳೆ ಬೆಳೆಗಾರರು ಹಾಗೂ ವರ್ತಕರ ಸಭೆ ನಡೆಯಿತು   

ಚಾಮರಾಜನಗರ: ರೈತರಿಂದ ಬಾಳೆ ಖರೀದಿಸುವಾಗ 6 ಕೆ.ಜಿ ಗೊನೆಗಳನ್ನೂ ಮೊದಲ ದರ್ಜೆ (ಫಸ್ಟ್‌ ಗ್ರೇಡ್‌) ಎಂದು ಪರಿಗಣಿಸಬೇಕು, ಎರಡನೇ ದರ್ಜೆಯ ಗೊನೆಗಳಿಗೆ ಶೇ 50ರ ಬದಲಾಗಿ ಶೇ 60ರಷ್ಟು ದರ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ವರ್ತಕರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಬಾಳೆ ಬೆಳೆಗಾರರು ಹಾಗೂ ವರ್ತಕರ ಸಭೆಯಲ್ಲಿ ವರ್ತಕರ ಹಾಗೂ ರೈತರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಗರಿಷ್ಠ ಬಾಳೆ ರಫ್ತಾಗುತ್ತಿದ್ದು ಅಲ್ಲಿನ ಜಿಲ್ಲಾಧಿಕಾರಿ ಹಾಗೂ ವರ್ತಕರ ಜೊತೆಗೆ ಸಭೆ ನಡೆಸಿ ಜಿಲ್ಲೆಯ ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ರೈತ ಮುಖಂಡ ಡಾ.ಗುರುಪ್ರಸಾದ್‌ ಮಾತನಾಡಿ, ‘ಬಾಳೆಗೊನೆ ಖರೀದಿಸುವಾಗ ವರ್ತಕರು ಅನುಸರಿಸುತ್ತಿರುವ ಮಾನದಂಡಗಳು ಸರಿ ಇಲ್ಲ. 7 ಕೆ.ಜಿಯ ಬಾಳೆಗೊನೆಯನ್ನು ಮೊದಲ ದರ್ಜೆ ಎಂದು ಪರಿಗಣಿಸಿ ₹ 40 ದರ ನಿಗದಿ ಮಾಡಿದರೆ, 6 ಕೆ.ಜಿ 900 ಗ್ರಾಂ ಗೊನೆಗೆ ಎರಡನೇ ದರ್ಜೆಯ ದರ ₹ 20 ನಿಗದಿಮಾಡುವುದು, 3 ಕೆ.ಜಿಯೊಳಗಿನ ಪುಡಿಗೊನೆಗೆ ಬಿಡಿಗಾಸು ನೀಡುತ್ತಿರುವುದು ಅವೈಜ್ಞಾನಿಕ ಹಾಗೂ ರೈತ ವಿರೋಧಿ ಧೋರಣೆಯಾಗಿದೆ ಎಂದರು.

ADVERTISEMENT

ಗೊನೆಯೊಂದಕ್ಕೆ ದಿಂಡಿನ ನಷ್ಟದ ಹೆಸರಿನಲ್ಲಿ ಒಂದೂವರೆ ಕೆ.ಜಿ ಕಳೆದರೆ ನಷ್ಟವಾಗಲಿದೆ. ಮೂರು ಕೆ.ಜಿಯ ಗೊನೆಯಲ್ಲಿ ಒಂದೂವರೆ ಕೆ.ಜಿಯಷ್ಟು ಕಡಿತಗೊಳಿಸಿದರೆ ರೈತರಿಗೆ ನಷ್ಟವಾಗಲಿದೆ. ಗೊನೆಯ ತೂಕದ ಶೇ 10ರಷ್ಟನ್ನು ಮಾತ್ರ ಕಡಿತಗೊಳಿಸಬೇಕು, ಇಲ್ಲವಾದರೆ ದಿಂಡಿನ ತೂಕ ಕಳೆಯಬೇಕು ಎಂದು ಸಭೆಯಲ್ಲಿ ರೈತರ ಪರವಾಗಿ ವಿಷಯ ಪ್ರಸ್ತಾಪಿಸಿದರು.

ಎಪಿಎಂಸಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಧಾವಿಸುತ್ತಿಲ್ಲ. ಮಾರುಕಟ್ಟೆ, ಹವಾಮಾನ ಆಧಾರಿತ ಬೆಳೆ ಬೆಳೆಯುವ ಸಲಹೆ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಬಾಳೆ ಬೆಳೆಯಲಾಗುತ್ತಿದ್ದು ಮೌಲ್ಯವರ್ಧನೆಗೆ ಸೂಕ್ತ ವ್ಯವಸ್ಥೆ ಸೌಲಭ್ಯಗಳಿಲ್ಲದೆ ಹೊರ ರಾಜ್ಯಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡುವ ಅನಿವಾರ್ಯತೆಗೆ ರೈತರು ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಇದಕ್ಕೆ ದನಿಗೂಡಿಸಿದ ರೈತ ಮುಖಂಡ ಹೆಗ್ಗವಾಡಿ ಮಹೇಶ್ ಕುಮಾರ್ ‘ವರ್ತಕರು ಏಕಪಕ್ಷೀಯವಾಗಿ ದರ ನಿಗದಿಮಾಡುತ್ತಿರುವುದು ಸರಿಯಲ್ಲ. ಹಿಂದೆ 4ಕೆ.ಜಿಗೂ ಹೆಚ್ಚು ತೂಕದ ಗೊನೆಯನ್ನು ಮೊದಲ ದರ್ಜೆ ಎಂದು ಪರಿಗಣಿಸಿ ಖರೀದಿಸಲಾಗುತ್ತಿತ್ತು. ಬಳಿಕ ರೈತರ ವಿರೋಧದ ನಡುವೆಯೂ ಹಂತ ಹಂತವಾಗಿ 7 ಕೆ.ಜಿವರೆಗೂ ಹೆಚ್ಚಿಸಲಾಗಿದೆ. ವರ್ತಕರ ಸರ್ವಾಧಿಕಾರಿ ಧೋರಣೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ವರ್ತಕರಾದ ಕುಮಾರ್ ಹಾಗೂ ಜಬೀವುಲ್ಲ ಮಾತನಾಡಿ, ಜಿಲ್ಲೆಯ ಬಹುಪಾಲು ಬಾಳೆ ಕೇರಳ ರಾಜ್ಯಕ್ಕೆ ರಫ್ತಾಗುತ್ತಿದ್ದು ಅಲ್ಲಿಯ ವರ್ತಕರು ಬಾಳೆ ಗೊನೆಗಳನ್ನು ಐದಾರು ದರ್ಜೆಯನ್ನಾಗಿ ವಿಂಗಡಿಸಿ ದರ ನಿಗದಿ ಮಾಡುತ್ತಿದ್ದಾರೆ. ಮೊದಲ ದರ್ಜೆಯ ಗೊನೆಗಳಿಗೆ ಮಾತ್ರ ಉತ್ತಮ ದರ ಸಿಗುತ್ತಿದ್ದು ಉಳಿದ ದರ್ಜೆಯ ಗೊನೆಗಳಿಗೆ ಶೇ 50ಕ್ಕೂ ಕಡಿಮೆ ದರ ನೀಡುತ್ತಿದ್ದಾರೆ.

ದಿಂಡಿನ ಹೆಸರಿನಲ್ಲಿ ಗೊನೆಗೆ ಒಂದೂವರೆ ಕೆ.ಜಿ ಕಡಿತ ಮಾಡುವುದು ಕೇರಳ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಡೆಯುತ್ತಿದೆ. ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಕೇರಳ ವ್ಯಾಪಾರಿಗಳು ಹಾಗೂ ಅಲ್ಲಿನ ಜಿಲ್ಲಾಡಳಿತದ ಜೊತೆಗೆ ಸಭೆ ನಡೆಸಿ ಜಿಲ್ಲೆಯ ವರ್ತಕರ ನೆರವಿಗೆ ಧಾವಿಸಬೇಕು. ರಾಜ್ಯದಲ್ಲಿ ಏಕರೂಪದ ನಿರ್ಧಾರ ಜಾರಿಗೆ ತರಬೇಕು, ಜಿಲ್ಲಾಡಳಿತದ ನಿರ್ಣಯದಿಂದ ವರ್ತಕರಿಗೆ ಆರ್ಥಿಕ ಹೊಡೆತ ನೀಡಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಮಹೇಶ್ ಪ್ರಭು, ಹೊನ್ನೂರು ಬಸವಣ್ಣ ಸೇರಿದಂತೆ ಹಲವರು ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಎಪಿಎಂಸಿ ಅಧ್ಯಕ್ಷ ಸೋಮೇಶ್‌, ನಿರ್ದೇಶಕ ವೆಂಕಟರಾವ್, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್‌, ಎಂಪಿಎಂಸಿ ಉಪ ನಿರ್ದೇಶಕ ಬಸವಣ್ಣ ಇದ್ದರು.

‘ತೂಕ ಕಡಿತಕ್ಕೆ ಅವಕಾಶವೇ ಇಲ್ಲ’

‘1966ರ ಎಪಿಎಂಸಿ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ರೈತರಿಂದ ಖರೀದಿಸುವ ಬೆಳೆಗಳಿಗೆ ವೇಸ್ಟೇಜ್ ಹೆಸರಿನಲ್ಲಿ ‌ತೂಕ ಕಡಿತಗೊಳಿಸಲು ಅವಕಾಶವೇ ಇಲ್ಲ. ವರ್ತಕರು ಹಾಗೂ ವ್ಯಾಪಾರಿಗಳು ಅಲಿಖಿತ ನಿಯಮದಡಿ ವಹಿವಾಟು ನಡೆಸುತ್ತಿದ್ದು ಕಡಿವಾಣ ಹಾಕಬೇಕು. ಎರಡನೇ ದರ್ಜೆಯ ಗೊನೆಗೆ ಮಾರುಕಟ್ಟೆಯ ದರಕ್ಕಿಂತ ಶೇ 50ರಷ್ಟು ಕಡಿತಗೊಳಿಸುವುದು ಅವೈಜ್ಞಾನಿಕ ಕನಿಷ್ಠ ಶೇ 80ರಷ್ಟು ದರ ನೀಡಬೇಕು. ಇಲ್ಲವಾದರೆ ಜಿಲ್ಲಾಡಳಿತವೇ ನೇರವಾಗಿ ಎಪಿಎಂಸಿ ಮೂಲಕ ಬಾಳೆಗೊನೆ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತ ಮುಖಂಡ ನಾಗಾರ್ಜುನ ಕುಮಾರ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.