ADVERTISEMENT

ವಿಜಯಾ ಬ್ಯಾಂಕ್‌ ಮ್ಯಾನೇಜರ್‌ ಎಸಿಬಿ ಬಲೆಗೆ

ಆಲೂರು: ತೀರುವಳಿ ಪತ್ರ ನೀಡಲು ರೈತನಿಂದ ₹13 ಸಾವಿರ ಲಂಚ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 15:47 IST
Last Updated 19 ಡಿಸೆಂಬರ್ 2019, 15:47 IST
ಮ್ಯಾನೇಜರ್‌ ಪ‍್ರವೀಣ್‌ ಅವರ ಕಚೇರಿಯಲ್ಲಿ ಎಸಿಬಿ ಪೊಲೀಸರು ಪರಿಶೀಲನೆ ನಡೆಸಿದರು
ಮ್ಯಾನೇಜರ್‌ ಪ‍್ರವೀಣ್‌ ಅವರ ಕಚೇರಿಯಲ್ಲಿ ಎಸಿಬಿ ಪೊಲೀಸರು ಪರಿಶೀಲನೆ ನಡೆಸಿದರು   

ಚಾಮರಾಜನಗರ: ಸಾಲ ತೀರುವಳಿ ಪತ್ರ ನೀಡಲು ರೈತರೊಬ್ಬರಿಂದ ₹13 ಸಾವಿರ ಲಂಚ ಪಡೆಯುತ್ತಿದ್ದ ತಾಲ್ಲೂಕಿನ ಆಲೂರು ಗ್ರಾಮದ ವಿಜಯ ಬ್ಯಾಂಕ್‌ನ (ಈಗ ಬ್ಯಾಂಕ್‌ ಆಫ್‌ ಬರೋಡಾ) ಮ್ಯಾನೇಜರ್‌ ಪ್ರವೀಣ್‌ ಚಂದರ್‌ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಗುರುವಾರ ಬಿದ್ದಿದ್ದಾರೆ.

ಸಿಂಗನಪುರದ ರೈತಸಿದ್ದಪ್ಪಾಜಿ ಎಂಬುವವರ ದೂರಿನ ಮೇರೆಗೆ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮ್ಯಾನೇಜರ್‌ ಸಿಕ್ಕಿ ಬಿದ್ದಿದ್ದಾರೆ.

ಸಿದ್ದಪ್ಪಾಜಿ ಅವರು ಬ್ಯಾಂಕ್‌ನಲ್ಲಿ ₹49 ಸಾವಿರ ಬೆಳೆ ಸಾಲ ಮಾಡಿದ್ದರು. ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಅದು ಮನ್ನಾ ಆಗಿತ್ತು. ಸಾಲ ತೀರಿರುವುದರ ಬಗ್ಗೆ ಪ್ರಮಾಣಪತ್ರ (ತೀರುವಳಿ ಪತ್ರ) ನೀಡುವಂತೆ ಸಿದ್ದಪ್ಪಾಜಿ ಅವರು ಮ್ಯಾನೇಜರ್‌ ಪ್ರವೀಣ್‌ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರು. ಪ್ರಮಾಣಪತ್ರ ನೀಡಲು ಪ್ರವೀಣ್‌ ಅವರು ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸಿದ್ದಪ್ಪಾಜಿ ಅವರು ಈಗಾಗಲೇ ₹2 ಸಾವಿರ ಕೊಟ್ಟಿದ್ದರು. ₹13 ಸಾವಿರ ನೀಡುವುದಕ್ಕೂ ಮೊದಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು. ಗುರುವಾರ ಸಿದ್ದಪ್ಪಾಜಿ ಅವರಿಂದ ಪ್ರವೀಣ್‌ ಅವರು ₹13 ಸಾವಿರ ಪಡೆಯುತ್ತಿದ್ದಾಗ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.₹13 ಸಾವಿರ ನಗದನ್ನು ಜಪ್ತಿ ಮಾಡಿರುವ ಎಸಿಬಿ ಪೊಲೀಸರು, ಪ್ರವೀಣ್‌ ಅವರನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಪೊಲೀಸ್‌ ವರಿಷ್ಠಾಧಿಕಾರಿ ಜೆ.ಕೆ.ರಶ್ಮಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣವರ್‌, ಇನ್‌ಸ್ಪೆಕ್ಟರ್‌ಗಳಾದ ಕೆ.ದೀಪಕ್‌, ಶ್ರೀಕಾಂತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.