ADVERTISEMENT

ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಬೇಡಗಂಪಣರ ಒತ್ತಾಯ

ಸಾಲೂರು ಬೃಹನ್ಮಠದಲ್ಲಿ ಬೇಡರ ಕಣ್ಣಪ್ಪ ಮೊದಲ ಜಯಂತಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:49 IST
Last Updated 25 ಜೂನ್ 2022, 6:49 IST
ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಬೇಡರ ಕಣ್ಣಪ್ಪ ಜಯಂತಿಯನ್ನು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಬೇಡರ ಕಣ್ಣಪ್ಪ ಜಯಂತಿಯನ್ನು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.   

ಮಹದೇಶ್ವರಬೆಟ್ಟ:‘ಹನೂರು ಭಾಗದಲ್ಲಿ ಮಾತ್ರ ವಾಸವಾಗಿರುವ ಬೇಡಗಂಪಣ ಸಮುದಾಯ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ. ಹಿಂದುಳಿದಿರುವ ಈ ಜನಾಂಗವನ್ನು ‘3ಬಿ’ಗೆ ಸೇರಿಸಲಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಬೇಡಗಂಪಣಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಪುಟ್ಟಣ್ಣ ಅವರು ಒತ್ತಾಯಿಸಿದರು.

ಇಲ್ಲಿನ ಸಾಲೂರು ಮಠದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬೇಡರ ಕಣ್ಣಪ್ಪ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಮಹದೇಶ್ವರ ಬೆಟ್ಟದಲ್ಲಿರುವ ಜಮೀನುಗಳ ಪೈಕಿ ಸರ್ವೆ ನಂಬರ್ 124ರಲ್ಲಿ 1,200 ಎಕರೆ ಜಮೀನು ಪೋಡಿಯಾಗಿಲ್ಲ. ಇದರಿಂದಾಗಿ ಅದನ್ನು ಮಾರುವಂತಿಲ್ಲ. ಸ್ವತಂತ್ರವಾಗಿ ಉಳುಮೆ ಮಾಡಲೂ ಆಗದ ದುಃಸ್ಥಿತಿ ಎದುರಾಗಿದೆ’ ಎಂದರು.

ಬೇಡಗಂಪಣ ಸಮುದಾಯದ ಆಚಾರ ವಿಚಾರಗಳ ಬಗ್ಗೆ ಮಾತನಾಡಿದ ಅವರು, ‘ಮಹದೇಶ್ವರ ಹಾಗೂ ಅವರ ಅನುಯಾಯಿಗಳನ್ನು ಪೂಜಿಸುವುದೇ ನಮ್ಮ ಜೀವನ. ನಮ್ಮ ಪೂಜಾ ವಿಧಾನವೂ ವಿಶಿಷ್ಟವಾಗಿದೆ. ನೈವೇದ್ಯ ಮಾಡುವಾಗ ಬಾಯಿಗೆ ಬಟ್ಟೆ ಕಟ್ಟಿಕೊಂಡಿರುತ್ತೇವೆ. ಪೂಜೆಗೆ ಹಸುವಿನ ಶುದ್ಧ ಹಾಲು, ತೆರೆದ ಬಾವಿಯ ನೀರನ್ನು ಮಾತ್ರ ಬಳಸಲಾಗುತ್ತದೆ.ಮಾದೇಶ್ವರನ ಅಪ್ಪಣೆ ಇಲ್ಲದೆ ನಾವು ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುತ್ತಿರಲಿಲ್ಲ. ಇಂದಿಗೂ ನಮ್ಮಲ್ಲಿ ವರದಕ್ಷಿಣೆ ಎಂಬುದು ಇಲ್ಲ. ಬದಲಿಗೆ ವಧುದಕ್ಷಿಣೆ ನೀಡಿ ವಿವಾಹವಾಗುವ ಪದ್ಧತಿಯಿದೆ’ ಎಂದರು.

ADVERTISEMENT

ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಮಾತನಾಡಿ, ‘ಆದಿವಾಸಿಗಳಿಗೂ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಇಂದಿಗೂ ಪ್ರಚಲಿತದಲ್ಲಿರುವ ಆದಿವಾಸಿಗಳ ದೇವಾಲಯವೆಂದರೆ ಮಹದೇಶ್ವರ ಸ್ವಾಮಿ ದೇವಾಲಯ ಹಾಗೂ ಪುರಿ ಜಗನ್ನಾಥ ದೇವಾಲಯ. ಶೈವ ಸಿದ್ಧಾಂತದ 63 ಪುರಾಣಗಳಲ್ಲಿ ಆದಿವಾಸಿಗಳ ಪುರಾಣವೂ ಒಂದಾಗಿದೆ. ಇವರಿಗೆ ಮೂಲ ಸೌಕರ್ಯ ನೀಡಿವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು’ ಎಂದು ಹೇಳಿದರು.

ಸಾಲೂರು ಮಠದ ಪಟ್ಟದ ಗುರುಸ್ವಾಮಿಗಳು, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡ ಮಠದಕಂಠಸ್ವಾಮೀಜಿ, ತಮಿಳುನಾಡಿನ ಬರಗೂರಿನ ದ್ರೋಣಗಿರಿ ಮಠದಅಶೋಕ ರಾಜೇಂದ್ರ ಸ್ವಾಮೀಜಿ, ತಮಿಳುನಾಡು ಬರಗೂರಿನ ಸುಬ್ರಮಣ್ಯ ರಾಜೇಂದ್ರಸ್ವಾಮೀಜಿ, ಗುಂಡೇಗಾಲದ ಸಾಲೂರು ಶಾಖಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹೊಂಡರಬಾಳು ಸಂಕಿನ ಮಠದ ನೀಲಕಂಠ ಶಿವಚಾರ್ಯ ಸ್ವಾಮೀಜಿ,ಬೇಡರಕಣ್ಣಪ್ಪ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಪಿ.ಮಹದೇವಸ್ವಾಮಿ ಇತರರು ಇದ್ದರು.

‘ವಿದ್ಯಾಭ್ಯಾಸಕ್ಕೆ ಸುತ್ತೂರಲ್ಲಿ ‌ಅವಕಾಶ’
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು, ‘ಬೇಡಗಂಪಣ ಮಕ್ಕಳವಿದ್ಯಾಭ್ಯಾಸಕ್ಕಾಗಿ ಸುತ್ತೂರು ಶಾಲೆ ಸದಾ ತೆರೆದಿರುತ್ತದೆ. ಮಕ್ಕಳನ್ನು ಅಲ್ಲಿಗೆ ಕಳುಹಿಸಿದರೆ ಉತ್ತಮ ನೀಡಲಾಗುವುದು’ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಕಷ್ಟದಲ್ಲಿ ಬದುಕುತ್ತಿರುವನೀವುಒಟ್ಟಾಗಿಕೆಲಸನಿರ್ವಹಿಸಿದರೆ ಕೊರತೆಗಳಿಂದ ಮುಕ್ತಿ ಹೊಂದಬಹುದು. ಇನ್ನೊಂದೆಡೆ ಈ ಭಾಗದ ಮಕ್ಕಳು ಶಾಲೆ ತೊರೆದು ಧೂಪ, ವಿಭೂತಿ, ಇತರೆ ಪದಾರ್ಥ ಮಾರಾಟ ಮಾಡುತ್ತಾ ವಿದ್ಯಾಭ್ಯಾಸದಿಂದ ವಂಚಿತರಾಗುವುದನ್ನು ತಪ್ಪಿಸಲು ಸುತ್ತೂರಿಗೆ ಕಳುಹಿಸಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.