
ಚಾಮರಾಜನಗರ: ಮಾನವನ ಕಲ್ಯಾಣಕ್ಕೆ ಶ್ರೇಷ್ಠ ಅಂಶಗಳನ್ನು ನೀಡಿರುವ ಮಹಾ ಗ್ರಂಥ ಭಗವದ್ಗೀತೆ ಎಂದು ಶ್ರೀಭಗವದ್ಗೀತೆ ಅಭಿಯಾನ ಸಮಿತಿ ಜಿಲ್ಲಾ ಅಧ್ಯಕ್ಷ ಮಹಾದೇವ ಗಣಪತಿ ಹೆಗಡೆ ಹೇಳಿದರು.
ಸೇವಾ ಭಾರತಿ ಸಂಸ್ಥೆಯ ಕೇಶವ ಭವನದಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಸ್ವರ್ಣವಲ್ಲಿ ಪ್ರತಿಷ್ಠಾನ, ಭಗವದ್ಗೀತಾ ಅಭಿಯಾನ ಸಮಿತಿ ಹಮ್ಮಿಕೊಂಡಿರುವ ಭಗವದ್ಗೀತೆ ಅಭಿಯಾನದ 11ನೇ ಅಧ್ಯಾಯದ ಪಾರಾಯಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಗವದ್ಗೀತೆಯು ವಿಶೇಷ ಜ್ಞಾನ, ಭಕ್ತಿ, ಶ್ರದ್ಧೆ, ಏಕಾಗ್ರತೆ ಬೆಳೆಸಲು ಉಪಯುಕ್ತ ಚಿಂತನೆಗಳನ್ನು ಹೊಂದಿವೆ ಎಂದರು.
2007ರಲ್ಲಿ ಆರಂಭವಾದ ಭಗವದ್ಗೀತಾ ಅಭಿಯಾನ ನಿರಂತರ 17 ವರ್ಷಗಳಿಂದ ನಡೆಯುತ್ತಿದ್ದು ಜಿಲ್ಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಗವದ್ಗೀತೆಯ ಸಾರವನ್ನು ಅರಿತಿದ್ದಾರೆ. ಭಗವದ್ಗೀತೆಯ ಪಠಣದಿಂದ ಮನಸ್ಸಿನಲ್ಲಿ ಶಾಂತಿ ನೆಲೆಸಿ, ಉತ್ಸಾಹ ಮೂಡುತ್ತದೆ, ಭಗವದ್ಗೀತೆಯ 11ನೇ ಅಧ್ಯಾಯದ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ ಭಗವದ್ಗೀತ ಕಂಠಪಾಠ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಹೆಚ್ಚಿನವರು ಭಾಗವಹಿಸಿ ವಿಜೇತರಾಗಬೇಕು ಎಂದು ತಿಳಿಸಿದರು.
ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ವಾಸದೇವರಾವ್ ಮಾತನಾಡಿ ‘ಭಗವದ್ಗೀತೆ ಮತ್ತು ಮಹಾಕಾವ್ಯಗಳ ನಿರಂತರ ಅಧ್ಯಯನದಿಂದ ಸಂಯಮ, ಪ್ರೀತಿ, ಭಕ್ತಿ, ನೆಮ್ಮದಿ ದೊರೆಯುತ್ತದೆ. ಶಿಕ್ಷಣ, ಕ್ರೀಡೆ, ಸಂಗೀತ ಸಹತ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಚೈತನ್ಯ ತುಂಬುತ್ತದೆ ಎಂದರು.
ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಅಭಿಷೇಕ್ ಮಾತನಾಡಿ ‘710 ಶ್ಲೋಕಗಳನ್ನು ಒಳಗೊಂಡಿರುವ ಭಗವದ್ಗೀತೆಯ 11ನೇ ಅಧ್ಯಾಯ 55 ಶ್ಲೋಕ ಹೊಂದಿದೆ. ಪ್ರತಿಯೊಬ್ಬರೂ ಅವುಗಳ ಸಾರ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಸಾಮೂಹಿಕವಾಗಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಕಾರ್ಯಕ್ರಮದಲ್ಲಿ ಚಿಂತಕ ಸುರೇಶ್ ಎನ್.ಋಗ್ವೇದಿ, ಮುಖಂಡರಾದ ಬಾಲಸುಬ್ರಹ್ಮಣ್ಯಂ, ರೋಟರಿ ಸುರೇಶ್, ರಾ.ಸತೀಶ ಕುಮಾರ್ ಪ್ರಾಂಶುಪಾಲರಾದ ರಾಧಿಕಾ ಗುಪ್ತಾ, ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.