ADVERTISEMENT

ಚಾಮರಾಜನಗರ: ಶ್ರದ್ಧಾ ಭಕ್ತಿಯ ಮಹಾವೀರ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 16:17 IST
Last Updated 14 ಏಪ್ರಿಲ್ 2022, 16:17 IST
ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಗುರುವಾರ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು
ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಗುರುವಾರ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು   

ಚಾಮರಾಜನಗರ: ಜಿಲ್ಲೆಯಾದ್ಯಂತ ಜೈನ ಸಮುದಾಯದವರುಗುರುವಾರ ಮಹಾವೀರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಜೈನ ಬಸದಿಗಳಲ್ಲಿ, ಮನೆಗಳಲ್ಲಿ ಮಹಾವೀರರಿಗೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಜಯಂತಿ ಆಚರಣೆ ಸರಳವಾಗಿತ್ತು. ಈ ಬಾರಿ ಬಸದಿಗಳಲ್ಲಿ ಹೆಚ್ಚು ಜನರು ಸೇರಿದ್ದರು.

ADVERTISEMENT

ನಗರದಕೊಳದ ಬೀದಿ ಪಾಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಶ್ರೀ 108 ಅಮಿತಾಂಜನ ಮುನಿ ಮಹಾರಾಜರ ನೇತೃತ್ವದಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು.

ಬೆಳಿಗ್ಗೆಯಿಂದ ಮಹಾವೀರರ ಮೂರ್ತಿಗೆ ಎಳನೀರು, ಕಬ್ಬಿನ ಹಾಲು, ಪಂಚಾಮೃತ, ಕಡ್ಲೆಬೇಳೆ, ಹೆಸರು ಬೇಳೆ, ತುಪ್ಪ ಮತ್ತು ಹಾಲು, ಮೊಸರು, ಕಲ್ಕಚೂರ್ಣ, ಅರಿಸಿನ, ಕಲ್ಲುಸಕ್ಕರೆ, ಕಷಾಯ, ಶ್ರೀಗಂಧ, ಅಷ್ಟಗಂಧ, ಚಂದನ, ಕನಕ, ಪುಷ್ಪವೃಷ್ಟಿ, ಅಭಿಷೇಕಗಳೊಂದಿಗೆ ಚಾಮರ ಸೇವೆ ನೆರವೇರಿಸಲಾಯಿತು. ನಂತರ ಭಕ್ತರು ಮುನಿಗಳ ಪಾದಪೂಜೆ ನಡೆಸಿದರು.

ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಹಣ್ಣು ವಿತರಿಸಲಾಯಿತು. ಸಂಜೆ ಮಹಾವೀರಸ್ವಾಮಿಯ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಅಂಗಡಿ ಬೀದಿ ಬ್ರಹ್ಮದೇವ ಬುಕ್ ಡಿಪೊ ಮುಂಭಾಗದಲ್ಲಿ ಬ್ರಹ್ಮೇಶ್ ಕುಮಾರ್ ಅವರು ಕಜ್ಜಾಯವನ್ನು ವಿತರಿಸಿದರು.

ಪಾರ್ಶ್ವನಾಥ ಜೈನ ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ವರ್ಧಮಾನಪ್ಪ, ರಮೇಶ್, ಸತೀಶ್ ಕುಮಾರ್ ಜೈನ್, ಸೂರಜ್, ಸಿದ್ಧಾರ್ಥ, ಬ್ರಹ್ಮದೇವ್, ಚಂದ್ರಪ್ರಭ ಜೈನ್, ನಾಗರತ್ನರಾಜು ಮತ್ತು ಜೈ ಶಾಮಾದೇವಿ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.