ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಶಿವನಸಮುದ್ರದ ದರ್ಗಾ ಹಿಂಭಾಗದ ಕಾವೇರಿ ನದಿಯಲ್ಲಿ ಮಂಗಳವಾರ ಈಜಲು ಹೋಗಿ ಮೃತಪಟ್ಟ ವಿದ್ಯಾರ್ಥಿ ನಂದನ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಗನ ಸಾವು ಸಹಜವಲ್ಲ. ಚತುರ್, ತುಷಾರ್, ಪವನ್, ಪ್ರಪುಲ್ಲ, ತನೈ, ರಜತ್ ಸೇರಿ ಭರಚುಕ್ಕಿಗೆ ಕರೆದೊಯ್ದು ರ್ಯಾಗಿಂಗ್ ಮಾಡಿದ್ದಾರೆ. ಬಟ್ಟೆ ಬಿಚ್ಚಿಸಿ ನೀರಿನಲ್ಲಿ ಕೊಲೆ ಮಾಡಿದ್ದಾರೆ’ ಎಂದು ನಂದನ್ ತಂದೆ ಡಾ.ಶಿವಶಂಕರ್ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿವರ: ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ದಯಾನಂದ್ ಸಾಗರ ಮೆಡಿಕಲ್ ಕಾಲೇಜಿನ 7 ವಿದ್ಯಾರ್ಥಿಗಳು ಭರಚುಕ್ಕಿ ಸಹಿತ ತಾಲ್ಲೂಕಿನ ಪ್ರವಾಸಿತಾಣಗಳ ವೀಕ್ಷಣೆಗೆ ಬಂದಿದ್ದರು. ಮಧ್ಯಾಹ್ನ ದರ್ಗಾದ ಹಿಂಭಾಗದ ಕಾವೇರಿ ನದಿಯಲ್ಲಿ ಈಜುವಾಗ ನೀರಿನ ಒತ್ತಡಕ್ಕೆ ಸಿಲುಕಿದ್ದರು. ಆರು ವಿದ್ಯಾರ್ಥಿಗಳು ಸುರಕ್ಷಿತವಾಗಿ ದಡ ಸೇರಿದರೆ, ನಂದನ್ ಕಣ್ಮರೆಯಾಗಿದ್ದರು.
ಬುಧವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.