ಚಾಮರಾಜನಗರ: ಅರಣ್ಯ ಅಪರಾಧಗಳ ಪತ್ತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ತರಬೇತಿ ಪಡೆದ ಶ್ವಾನ ಝಾನ್ಸಿ ವಾರದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದೆ.
ಡಿ.30ರಂದೇ ಘಟನೆ ನಡೆದಿದ್ದರೂ, ಮಾಹಿತಿ ಬಹಿರಂಗಗೊಂಡಿರಲಿಲ್ಲ. ಶ್ವಾನವನ್ನು ಪುಣಜನೂರಿನಲ್ಲಿ ನಿಯೋಜಿಸಲಾಗಿತ್ತು.
ತರಬೇತಿ ಪಡೆದು ಬರುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ನಾಯೊಂದನ್ನು ಬೆನ್ನಟ್ಟಿಕೊಂಡು ಹೋದಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜರ್ಮನ್ ಶೆಫರ್ಡ್ ತಳಿಯಹೆಣ್ಣು ಶ್ವಾನವನ್ನು 2021ರ ನವೆಂಬರ್ 25ರಂದು ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಲಾಗಿತ್ತು. ಆಗ ಅದಕ್ಕೆ ಒಂಬತ್ತು ತಿಂಗಳು ವಯಸ್ಸಾಗಿತ್ತು.
ಟ್ರಾಫಿಕ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಝಾನ್ಸಿಯನ್ನು ಇಲಾಖೆಯ ಸೇವೆಗೆ ನಿಯೋಜಿಸಲಾಗಿತ್ತು. ಇದಕ್ಕೂ ಮೊದಲು ಏಳು ತಿಂಗಳ ಕಾಲ ಚಂಡೀಗಡದ ಐಟಿಬಿಪಿ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆಗೆ ಸಂಬಂಧಿಸಿದ ತರಬೇತಿಯನ್ನು ಅದಕ್ಕೆ ನೀಡಲಾಗಿತ್ತು.
ಅರಣ್ಯ ಇಲಾಖೆಗೆ ಸೇರ್ಪಡೆಗೊಂಡ ಬಳಿಕ ಯಾವುದೇ ಕಾರ್ಯಾಚರಣೆಗಳಲ್ಲಿ ಶ್ವಾನ ಭಾಗವಹಿಸಿರಲಿಲ್ಲ.
ಪತ್ತೆಯಾಗದ ಹುಲಿ ಮರಿ: ಈ ಮಧ್ಯೆ, ಬಿಆರ್ಟಿಯ ಕೆ.ಗುಡಿ ಸಫಾರಿ ವಲಯದಲ್ಲಿ ಪ್ರವಾಸಿಗರ ಕಣ್ಣಿಗೆ ಬಿದ್ದಿರುವ, ರೆಕ್ಟಲ್ ಪ್ರೊಲಾಪ್ಸ್ (ಗುದನಾಳದ ಹೊರಚಾಚುವಿಕೆ) ಆಗಿರಬಹುದು ಎಂದು ಶಂಕಿಸಲಾದ ಹುಲಿ ಮರಿ ಎರಡನೇ ದಿನವೂ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ನಿಗಾ ಇಟ್ಟಿದ್ದಾರೆ. ಆದರೆ, ಹುಲಿ ಮರಿ ಕಂಡು ಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.