
ಕೊಳ್ಳೇಗಾಲ: ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿಗೆ ಯುವಕರೊಬ್ಬರು ಸೇತುವೆ ಮೇಲಿನಿಂದ ಹಾರಿದ್ದು, ಹುಡುಕಾಟ ನಡೆಸಲಾಗುತ್ತಿದೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಕಾಳಬಸವನ ಹುಂಡಿ ಗ್ರಾಮದ ಶಿವು (19) ನದಿಗೆ ಹಾರಿದ ಯುವಕ.
ಶಿವು ಅವರಿಗೆ ಆಗಾಗ್ಗೆ ಅನಾರೋಗ್ಯ ಕಾಣಿಸಿಕೊಳ್ಳುತ್ತಿತ್ತು, ಇದರಿಂದ ಬೇಸತ್ತ ಯುವಕ ಬುಧವಾರ ಬೆಳಿಗ್ಗೆ 8.30ರ ವೇಳೆ ಅವರ ದೊಡ್ಡಪ್ಪನ ಮಗನಿಗೆ ದೂರವಾಣಿಯ ಮೂಲಕ ಕರೆ ಮಾಡಿ, ‘ನಾನು ದಾಸನಪುರದ ಸೇತುವೆ ಮೇಲೆ ನಿಂತಿದ್ದು, ನದಿಗೆ ಹಾರುತ್ತೇನೆ. ನಮ್ಮ ಅಣ್ಣ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೋ’ ಎಂದು ಫೋನ್ ಮಾಡಿ ಜೊತೆಗೆ ವಾಟ್ಸ್ ಆ್ಯಪ್ನಲ್ಲಿ ಮೆಸೇಜ್ ಕಳುಹಿಸಿದ್ದಾರೆ.
‘ನಾನು ಈಗ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿರುವ ಈ ಎರಡು ಭಾವಚಿತ್ರಗಳನ್ನೇ ನಮ್ಮ ಗ್ರಾಮದ ಮುಂದೆ ಭಾವಪೂರ್ಣ ಶ್ರದ್ಧಾಂಜಲಿಗೆ ಹಾಕಿಸಬೇಕು’ ಎಂದು ಸಂದೇಶ ಕಳುಹಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ದಾಸನಪುರ ಗ್ರಾಮದ ಕಾವೇರಿ ನದಿ ಸೇತುವೆ ಮೇಲೆ ಬಂದಾಗ ಶಿವು ಹಾಕುತ್ತಿದ್ದ ಚಪ್ಪಲಿ ಹಾಗೂ ಬೈಕ್ ಸೇತುವೆ ಮೇಲೆ ನಿಂತಿತ್ತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನುರಿತ ಈಜುಗಾರರು ಶೋಧ ನಡೆಸುತ್ತಿದ್ದಾರೆ.
ಶಿವು ಅವರ ಸಹೋದರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.