ADVERTISEMENT

ಚಾಮರಾಜನಗರ ಜಿಲ್ಲೆ ಅಭಿವೃದ್ಧಿಗೆ ಕೆಲಸ ಮಾಡಲು ಸಿದ್ಧ: ಪುನೀತ್‌ ರಾಜ್‌ಕುಮಾರ್‌

ಜಿಲ್ಲಾಡಳಿತ ಸಿದ್ಧಪಡಿಸಿರುವ ಪ್ರವಾಸೋದ್ಯಮ ಉತ್ತೇಜನ ವಿಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 13:35 IST
Last Updated 13 ನವೆಂಬರ್ 2020, 13:35 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ವಿಡಿಯೊ ಬಿಡುಗಡೆ ಮಾಡಿದರು. ನಟ ಪುನೀತ್‌ ರಾಜ್‌ಕುಮಾರ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ವಿಡಿಯೊ ಬಿಡುಗಡೆ ಮಾಡಿದರು. ನಟ ಪುನೀತ್‌ ರಾಜ್‌ಕುಮಾರ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು   

ಚಾಮರಾಜನಗರ: ‘ಗಡಿ ಜಿಲ್ಲೆ ಚಾಮರಾಜನಗರದ ಅಭಿವೃದ್ಧಿಗಾಗಿ ನನ್ನಿಂದಾಗುವ ಎಲ್ಲ ಕೆಲಸವನ್ನು ಮಾಡುವೆ. ಮುಂದೆಯೂ ಸಹಕಾರ ನೀಡುತ್ತೇನೆ’ ಎಂದು ಚಿತ್ರ ನಟ, ಜಿಲ್ಲೆಯ ರಾಯಭಾರಿ ‍ಪುನೀತ್‌ ರಾಜ್‌ಕುಮಾರ್‌ ಅವರು ಭರವಸೆ ನೀಡಿದರು.

ಜಿಲ್ಲೆಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಸಿದ್ಧಪಡಿಸಿರುವ ‘ಚೆಲುವ ಚಾಮರಾಜನಗರ–ಹುಲಿಗಳ ನಾಡು’ ವಿಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಮಾತನಾಡಿದ ಅವರು, ‘ಚಾಮರಾಜನಗರ ಜಿಲ್ಲೆಇದು ನನ್ನ ತಂದೆಯವರ ತವರೂರು. ನನ್ನನ್ನು ಜಿಲ್ಲೆಯ ರಾಯಭಾರಿಯನ್ನಾಗಿ ಮಾಡಿರುವುದಕ್ಕೆ ಹೆಮ್ಮೆ ಇದೆ’ ಎಂದರು.

‘ಚಾಮರಾಜನಗರ ಮಾತ್ರ ಅಲ್ಲದೇ, ನಮ್ಮ ರಾಜ್ಯ ಹಾಗೂ ಇಡೀ ದೇಶ ಅಭಿವೃದ್ಧಿಯಾಗಬೇಕಿದೆ’ ಎಂದರು.

ADVERTISEMENT

ವಿಡಿಯೊ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ‘ಚಾಮರಾಜನಗರಕ್ಕೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇದೆ. ಆದರೆ, ಪ್ರಾಕೃತಿಕವಾಗಿ, ಧಾರ್ಮಿಕವಾಗಿ ಇದು ಶ್ರೀಮಂತ ಜಿಲ್ಲೆ. ಪ‍್ರವಾಸೋದ್ಯಮಕ್ಕೆ ಇಲ್ಲಿ ವಿಪುಲ ಅವಕಾಶಗಳಿವೆ. ಅದನ್ನು ನಾವು ಬಳಸಿಕೊಳ್ಳಬೇಕು’ ಎಂದರು.

‘ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಉತ್ತಮ ವಿಡಿಯೊವನ್ನು ಸಿದ್ಧಪಡಿಸಿದೆ. ಪ್ರವಾಸಿ ತಾಣಗಳ ಬಗ್ಗೆ ನಾವು ಪ್ರಚಾರ ನಡೆಸಬೇಕಾಗಿದೆ. ಪ್ರವಾಸಿಗರನ್ನು ಕರೆತರಬೇಕಿದೆ. ಆಗ ಜಿಲ್ಲೆಯ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರು ಜಿಲ್ಲೆಯ ರಾಯಭಾರಿಯಾಗಿರುವುದು ನಮಗೆ ಶಕ್ತಿ ತುಂಬಿದೆ’ ಎಂದು ಹೇಳಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ಎನ್‌.ಮಹೇಶ್‌, ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಇದ್ದರು.

ವಿಡಿಯೊದಲ್ಲಿ ಏನಿದೆ?: 4.19 ನಿಮಿಷಗಳ ವಿಡಿಯೊದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು, ಜಲಪಾತಗಳು ದೇವಾಲಯಗಳು, ಅರಣ್ಯ ಪ್ರದೇಶ, ಬೆಡ್ಡ ಗುಡ್ಡಗಳು, ಇಲ್ಲಿನ ಜಾನಪದ ಸಂಸ್ಕೃತಿ, ಕೃಷಿ, ರೇಷ್ಮೆ ಚಟುವಟಿಕೆಗಳು, ಜನಜೀವನ ಬಿಂಬಿಸುವ ದೃಶ್ಯಾವಳಿಗಳಿವೆ.

ವಿಡಿಯೊದ ಕೊನೆಯಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರು ‘ನಮ್ಮ ನಾಡು, ಹುಲಿಗಳ ನಾಡು ಚಾಮರಾಜನಗರ, ಬನ್ನಿ ನನ್ನ ಜೊತೆ’ ಎಂಬ ಸಂದೇಶವನ್ನೂ ನೀಡಿದ್ದಾರೆ.

ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳು ಗಮನಸೆಳೆಯುತ್ತವೆ. ವನ್ಯಧಾಮಗಳ ವ್ಯಾಪ್ತಿಯಲ್ಲಿರುವ ಹಾಗೂ ಜನರಿಗೆ ಪ್ರವೇಶಕ್ಕೆ ಅನುಮತಿ ಇಲ್ಲದ ಪ್ರದೇಶಗಳ ಸುಂದರ ದೃಶ್ಯಾವಳಿಗಳೂ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.