ADVERTISEMENT

ಯಳಂದೂರು: ಬಲಿ ಪ್ರಾಣಿ ಎಳೆದೊಯ್ದ ಚಿರತೆ

ಶನಿವಾರವೂ ಕುಂತೂರು ಗುಡ್ಡದಲ್ಲಿ ಬೀಡಬಿಟ್ಟ ಚಿರತೆ, ಗ್ರಾಮದಲ್ಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 7:13 IST
Last Updated 30 ಜುಲೈ 2023, 7:13 IST
ಕುಂತೂರು ಗುಡ್ಡದ ಆಸುಪಾಸಿನಲ್ಲಿ ಶನಿವಾರ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ
ಕುಂತೂರು ಗುಡ್ಡದ ಆಸುಪಾಸಿನಲ್ಲಿ ಶನಿವಾರ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ   

ಯಳಂದೂರು: ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಬಾಲಕನ ಮೇಲೆ ದಾಳಿ ಮಾಡಿರುವ ಚಿರತೆ ಶನಿವಾರವೂ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗುಡ್ಡದ ಪರಿಸರದಲ್ಲಿ ಕಂಡು ಬಂದಿದ್ದು, ಸೆರೆ ಹಿಡಿಯುವ ಉದ್ದೇಶದಿಂದ ಬಲಿ ಪ್ರಾಣಿಯಾಗಿ ಇರಿಸಲಾಗಿದ್ದ ನಾಯಿಯನ್ನು ಎಳೆದೊಯ್ದಿದೆ.

ಯಳಂದೂರು ತಾಲ್ಲೂಕಿನ ಹೊಸೂರು, ಕುಂತೂರು ಮೋಳೆ ಹಾಗೂ ಕುಂತೂರು ಸುತ್ತಮುತ್ತ ಹೊಸದಾಗಿ ಮತ್ತೊಂದು ಬೋನು ಇಡಲಾಗಿದೆ.  ಅಗರ, ಮಾಂಬಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಚಲನವಲನ ಕಂಡುಬಂದರೆ ಮಾಹಿತಿ ನೀಡುವಂತೆ  ಪೊಲೀಸರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. 

ಪೊಲೀಸರ ಗಸ್ತು: ಚಿರತೆ ಪ್ರತಿದಿನ ಜಾಡು ಸಂಭವ ಇರುವುದರಿಂದ ಗ್ರಾಮಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ-ಕಾಲೇಜು ಮಕ್ಕಳಿಗೂ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಅಗರ-ಮಾಂಬಳ್ಳಿ ಸಬ್ ಇನ್‌ಸ್ಪೆಕ್ಟರ್‌ ವೆಂಕಟೇಶ್ ಹೇಳಿದರು.

ADVERTISEMENT

ಹೊಸ ಕಾರ್ಯತಂತ್ರ: ಚಿರತೆ ಸೆರೆಗೆ ಅರಣ್ಯ ಇಲಾಖೆ ಹೊಸ ಕಾರ್ಯತಂತ್ರ ಹೆಣೆದಿದೆ. ಬೋನುಗಳಲ್ಲಿ ಮಾತ್ರವಲ್ಲದೇ, ನಿರ್ಜನ ಪ್ರದೇಶಗಳಲ್ಲಿ ಬಲಿ ಪ್ರಾಣಿಗಳನ್ನು ಕಟ್ಟಿ ಹಾಕಲಾಗಿದೆ. ಆ ಜಾಗದ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. 

ಕುಂತೂರು ಗುಡ್ಡದಲ್ಲಿ ಶನಿವಾರ ಇದೇ ರೀತಿ ಕಟ್ಟಿ ಹಾಕಲಾಗಿದ್ದ ನಾಯಿಯನ್ನು ಚಿರತೆ ಎಳೆದೊಯ್ದಿದೆ. ನಾಯಿ ತಿನ್ನುವ ಆಸೆಗೆ ಮತ್ತೊಮ್ಮೆ ಚಿರತೆ ಬರಲಿದೆ. ಈ ಸಮಯದಲ್ಲಿ ಚಿರತೆಗೆ ಅರಿವಳಿಕೆ ನೀಡುವ ಬಗ್ಗೆ ಚಿಂತಿಸಲಾಗಿದೆ. ಚುಚ್ಚುಮದ್ದು ಪ್ರಯೋಗ ಮಾಡುವ ಸಿಬ್ಬಂದಿ ಶನಿವಾರ ರಜೆ ಇದ್ದುದ್ದರಿಂದ ಚಿರತೆ ಕಂಡರೂ ಮದ್ದು ಪ್ರಯೋಗ ನಡೆದಿಲ್ಲ ಎಂದು ಅರಣ್ಯ ಸಿಬ್ಬಂದಿ ಅಸಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.