ADVERTISEMENT

ಯುವಜನೋತ್ಸವ | ನೆಲಮೂಲ ಸಂಸ್ಕೃತಿ ಅನಾವರಣ: ಕಣ್ಮನ ಸೆಳೆದ ಜನಪದ ಗೀತೆಗಳ ಗಾಯನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 2:37 IST
Last Updated 17 ಅಕ್ಟೋಬರ್ 2025, 2:37 IST
   

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗುರುವಾರ ‌ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ನೆಲಮೂಲದ ಸಂಸ್ಕೃತಿ ಅನಾವರಣವಾಯಿತು.

ಜನಪದ ಗೀತೆ, ಜನಪದ ನೃತ್ಯ, ಚಿತ್ರಕಲೆ, ಕವಿತೆ, ಕಥೆ, ವಿಜ್ಞಾನ ಮೇಳ ಹಾಗೂ ಘೋಷಣೆ ಸ್ಪರ್ಧೆಗಳಲ್ಲಿ ಯುವಜನತೆ ಭಾಗವಹಿಸಿ ಪ್ರತಿಭೆ ಪ್ರದರ್ಶನ ಮಾಡಿದರು. ಪೂಜಾ ಕುಣಿತ, ಪಟ ಕುಣಿತ, ಜಾನಪದ ನೃತ್ಯ, ಜಾನಪದ ಗೀತೆಗಳ ಗಾಯನ, ಮಂಟೇಸ್ವಾಮಿ, ಮಲೆ ಮಾದಪ್ಪನ ಕಾವ್ಯಗಳು ನೆರೆದಿದ್ದವರನ್ನು ರಂಜಿಸಿದವು.

ಜಾನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಚಾಮರಾಜನಗರದ ಜನಪದ ಕಲಾವಿದ ಗುರುರಾಜ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆದರೆ, ಜಾನನಪದ ಜನಪದ ನೃತ್ಯ ಸ್ಪರ್ಧೆಯಲ್ಲಿ ಹರದನಹಳ್ಳಿ ಕೃಷಿ ಮಹಾ ವಿದ್ಯಾಲಯದ ಕಾರ್ತಿಕ್ ನೇತೃತ್ವದ ತಂಡ ಮೊದಲ ಸ್ಥಾನ ಪಡೆಯಿತು.

ADVERTISEMENT

ಫಲಿತಾಂಶ: ಕಥೆ ಬರೆಯುವ ಸ್ಪರ್ಧೆ:

ಸೋನು (ಕೃಷಿ ವಿಶ್ವವಿದ್ಯಾಲಯ) ಪ್ರಥಮ, ನಾಗೇಂದ್ರ ಹೊನ್ನೂರು ದ್ವಿತೀಯ, ಪಿ.ಕೆ.ಅನಿತಾ (ಮನೋನಿಧಿ ಕಾಲೇಜು) ತೃತೀಯ, ಚಿತ್ರಕಲೆ: ಅಶ್ವಿನಿ (ಜೆಎಸ್‌ಎಸ್‌ ಕಾಲೇಜು) ಪ್ರಥಮ, ಎನ್‌.ಶೃತಿ (ಬನ್ನಿತಾಳಪುರ ಗುಂಡ್ಲುಪೇಟೆ) ದ್ವಿತೀಯ, ಎನ್‌.ವಿಷ್ಣು (ವಾಸು ಕಾಲೇಜು ಕೊಳ್ಳೇಗಾಲ) ತೃತೀಯ, ಘೋಷಣೆ: ಆಕಾಶ್‌ ಕೆ ಪ್ರಥಮ, ಅಮಿತ್ ಕುಮಾರ್ ದ್ವಿತೀಯ, ಅಮಿತ್ ವಿನೋದಮೂರ್ತಿ ತೃತೀಯ.

ಕವಿತೆ: ರಮ್ಯಾ ಪ್ರಥಮ, ಭಾನು ದ್ವಿತೀಯ, ಹರ್ಷ ತೃತೀಯ, ವಿಜ್ಞಾನ ಮೇಳ; ಆದರ್ಶ ವಿದ್ಯಾಲಯ ಕೊಳ್ಳೇಗಾಲ ಪ್ರಥಮ, ಸರ್ಕಾರಿ ಪದವಿಪೂರ್ವ ಕಾಲೇಜು ಸಂತೇಮರಹಳ್ಳಿ ದ್ವಿತೀಯ, ಸರ್ಕಾರಿ ಪ್ರೌಢಶಾಲೆ ಹುಂಡಿಪುರ ತೃತೀಯ, ಜಾನಪದ ಗೀತೆ: ಗುರುರಾಜ್ ತಂಡ ಪ್ರಥಮ, ನಿರಂಜನ್ ತಂಡ ದ್ವಿತೀಯ, ಜೀವನ್‌ ತಂಡ ತೃತೀಯ, ಜಾನಪದ ನೃತ್ಯ: ಕಾರ್ತಿಕ್ ತಂಡ ಪ್ರಥಮ, ಗುರುರಾಜ್ ತಂಡ ದ್ವಿತೀಯ, ಮಧುಶ್ರೀ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.‌

ಯುವಜನತೆಯ ಸಂಭ್ರಮ;

 ಚಾಮರಾಜ ನಗರ, ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕುಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಯುವ ಜನೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ 12 ತಂಡ, ಜನಪದ ನೃತ್ಯ ಸ್ಪರ್ಧೆಯಲ್ಲಿ 10 ತಂಡ, ಘೋಷಣೆ ಸ್ಪರ್ಧೆಯಲ್ಲಿ 10, ಚಿತ್ರಕಲಾ ಸ್ಪರ್ಧೆಯಲ್ಲಿ 60 ಮಂದಿ, ಕವಿತೆ ಸ್ಪರ್ಧೆಯಲ್ಲಿ 45 ಹಾಗೂ ಕಥಾ ಸ್ಪರ್ಧೆಯಲ್ಲಿ 48, ವಿಜ್ಞಾನ ಮೇಳದಲ್ಲಿ 20 ತಂಡಗಳು ಸೇರಿದಂಥೆ 483 ಮಂದಿ ಭಾಗವಹಿಸಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್, ಚಾಮರಾಜನಗರ ವಿ.ವಿ ಜಾನಪದ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್ ಜಗದೀಶ್, ಎನ್.ಎಸ್.ಎಸ್ ಸಂಯೋಜಕ ಡಾ.ಮಹೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ, ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಕಲಾವಿದ ಮಧುಸೂದನ್, ಸಾಹಿತಿ ಶೀಲಾ ಸತ್ಯೇಂದ್ರಸ್ವಾಮಿ, ಮುಖಂಡ ಜಿ.ಬಂಗಾರು, ಪದ್ಮಾ ಪುರುಷೋತ್ತಮ್ ಕಾರ್ಯಕ್ರಮದಲ್ಲಿ ಇದ್ದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ’
ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರಾಗಿದ್ದು ಕಲಾವಿದರು ಜಾನಪದ ಕಲೆಗಳು ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು. ಕಲಾಪ್ರತಿಭೆ ಹೊರಹೊಮ್ಮಲು ಯುವಜನೋತ್ಸವ ವೇದಿಕೆಯಾಗಬೇಕು ಎಂದು ನಗರಸಭೆ ಅಧ್ಯಕ್ಷ ಸುರೇಶ್ ಹೇಳಿದರು.
ಜಿಲ್ಲೆಯ ಜಾನಪದ ಕಲೆ, ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಿದ್ದು ಯುವಜನೋತ್ಸವದಂತಹ ವೇದಿಕೆಗಳನ್ನು ಯುವ ಕಲಾವಿದರು ಸಮರ್ಥವಾಗಿ ಬಳಸಿಕೊಳ್ಳಬೇಕು
ಮಹೇಶ್‌, ನಗರಸಭೆ ಸದಸ್ಯ
ಚೆಲುವ ಚಾಮರಾಜನಗರ ಜಾನಪದ ಕಲೆಗಳ ತವರಾಗಿದ್ದು ಯುವಜನೋತ್ಸವ ಕಾರ್ಯಕ್ರಮ ಯುವ ಪ್ರತಿಭೆಗಳ ಕಲಾಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿದೆ
ಡಿ.ಸಿ.ಶೃತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ 
ಕೇಂದ್ರ ಹಾಗೂ ರಾಜ್ಯ ಸರ್ಕಾರ ಯುವಜನತೆಯ ಕೇಂದ್ರಿತವಾಗಿ ಯುವನೀತಿ ಜಾರಿಗೊಳಿಸಿವೆ. ಕಲೆ, ಸಂಸ್ಕೃತಿ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ನೀರೆಯುವುದು ಯುವನೀತಿಯ ಉದ್ದೇಶವಾಗಿದೆ
ಕೆ.ಸುರೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.