ADVERTISEMENT

ಚಾಮರಾಜನಗರ: ಮನೆ ಮನೆಗೆ ಪೊಲೀಸ್; ಸಮಸ್ಯೆಗಳಿಗೆ ತ್ವರಿತ ಸ್ಪಂದನೆ

ಅಪರಾಧ ಕೃತ್ಯಗಳ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್‌ಪಿ ಬಿ.ಟಿ.ಕವಿತಾ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:03 IST
Last Updated 23 ಜುಲೈ 2025, 2:03 IST
ಚಾಮರಾಜನಗರದ ಸಿದ್ದಾರ್ಥ ನಗರದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಕತಪತ್ರಗಳನ್ನು ಬಿಡುಗಡೆಗೊಳಿಸಿದರು
ಚಾಮರಾಜನಗರದ ಸಿದ್ದಾರ್ಥ ನಗರದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಕತಪತ್ರಗಳನ್ನು ಬಿಡುಗಡೆಗೊಳಿಸಿದರು   
ಪ್ರತಿ ಎರಡನೇ ಶನಿವಾರ ಬೀಟ್ ಮುಖ್ಯಸ್ಥರ ಸಭೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಸ್ಯೆಗೆ ಪರಿಹಾರ | ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು: ಎಸ್‌ಪಿ

ಚಾಮರಾಜನಗರ: ಲಕ್ಷಾಂತರ ರೂಪಾಯಿ ವ್ಯಯಿಸಿ ಕನಸಿನ ಮನೆ ನಿರ್ಮಾಣ ಮಾಡುವ ಸಾರ್ವಜನಿಕರು ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ಉದಾಸೀನತೆ ತೋರಿದರೆ ಕಳ್ಳತನಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಎಚ್ಚರಿಕೆ ನೀಡಿದರು.

ಸಿದ್ದಾರ್ಥ ನಗರದ ಸಾಯಿಬಾಬಾ ದೇವಸ್ಥಾನದ ಮುಂಭಾಗ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಪರಾಧ ಕೃತ್ಯಗಳು ನಡೆದಾಗ ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡುವುದು, ಪೊಲೀಸರು ಕೃತ್ಯಗಳನ್ನು ಬೇಧಿಸುವುದು ‌ಸಾಂಪ್ರದಾಯಿಕ ಕ್ರಮವಾಗಿದೆ.

‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಡಿ ಪೊಲೀಸರೇ ಸಾರ್ವಜನಿಕರ ಮನೆ ಬಾಗಿಲಿಗೆ ಬಂದು ಅಹವಾಲುಗಳನ್ನು ಆಲಿಸಿ ಪರಿಹರಿಸಲಿದ್ದಾರೆ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸಲು ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ ನಾಗರಿಕರಲ್ಲಿ ಸುರಕ್ಷತಾ ಭಾವ ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಎಸ್‌ಪಿ ಹೇಳಿದರು.

ADVERTISEMENT

ಸಾರ್ವಜನಿಕರ ಸಮಸ್ಯೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲು ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸರಹದ್ದನ್ನು ಬೀಟ್‍ಗಳಾಗಿ ವಿಂಗಡಿಸಲಾಗಿದೆ. ಒಟ್ಟು 20 ಬೀಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಉಪ ಬೀಟ್‍ಗಳಲ್ಲಿ 40 ರಿಂದ 50 ಮನೆಗಳ ಗುಂಪು ರಚಿಸಿ ಪ್ರತಿ ಕ್ಲಸ್ಟರ್‌ಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಯಾ ಪರಿಸರದ ಓರ್ವ ಮುಖಂಡ ಕ್ಲಸ್ಟರ್‌ನಲ್ಲಿ ಇರಲಿದ್ದಾರೆ. ಬೀಟ್‌ ಉಸ್ತುವಾರಿಗಳನ್ನಾಗಿ ಎಎಸ್‌ಐ, ಪಿಎಸ್ಐ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೀಟ್‌ಗೆ ಬರುವ ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಮನೆ ಹಾಗೂ ಸುತ್ತಮುತ್ತಲಿನ ಪರಿಸರಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ, ಸಂಶಯಾಸ್ಪದ ಕೃತ್ಯಗಳು ನಡೆದರೆ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರನ್ನು ‌ಗೌಪ್ಯವಾಗಿರಿಸಲಾಗುವುದು. ಅಪರಾಧ ಕೃತ್ಯಗಳು ನಡೆಯುವ ಮುನ್ನವೇ ತಪ್ಪಿಸುವುದು ಉದ್ದೇಶ ಎಂದರು.

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಜಾತಿ, ಧರ್ಮ, ಆದಾಯ, ಉದ್ಯೋಗ, ವಿವಾರ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕರಿಂದ ಪಡೆಯಲಾಗುವುದಿಲ್ಲ. ಕುಟುಂಬದ ಸದಸ್ಯರ ಹೆಸರು, ಮೊಬೈಲ್ ಸಂಖ್ಯೆಯ ವಿವರ ಮಾತ್ರ ಕಲೆ ಹಾಕಲಾಗುವುದು ಎಂದು ಎಸ್‌ಪಿ ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ಶಶಿಧರ್ ಮಾತನಾಡಿ ಸಮಾಜದಲ್ಲಿ ಅಪರಾಧ ತಡೆಯಲು‌ ‌ಹಾಗೂ ಪತ್ತೆಹಚ್ಚಲು ಸಾರ್ವಜನಿಕರ ಸಹಕಾರ ಅಗತ್ಯ. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದೊಂದಿಗೆ ಕೈಜೋಡಿಸುವ ಮೂಲಕ ಅಪರಾಧ ಕೃತ್ಯಗಳ ತಡೆಗೆ ಸಹಕಾರ ನೀಡಬೇಕು ಎಂದರು.

ಉಚಿತ ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098, ಹಿರಿಯ ನಾಗರಿಕರ ಸಹಾಯವಾಣಿ 1090, ಸೈಬರ್ ಅಪರಾಧ ಸಂಖ್ಯೆ 1030, ಮಹಿಳಾ ಸಹಾಯವಾಣಿ 1091 ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ನಗರಸಭಾ ಸದಸ್ಯರಾದ ಕುಮುದಾ ಕೇಶವಮೂರ್ತಿ ಮಾತನಾಡಿದರು. ಡಿವೈಎಸ್‍ಪಿಗಳಾದ ಲಕ್ಷ್ಮಯ್ಯ, ಧರ್ಮೇಂದ್ರ, ಕ್ಲಸ್ಟರ್ ಬೀಟ್‍ನ ಗುರುಸ್ವಾಮಿ ಇದ್ದರು.

‘ಯಾರಿನ್ನು ಸಂಪರ್ಕಿಸಬೇಕು’

ಚಾಮರಾಜನಗರದ ಸಿದ್ದಾರ್ಥ ನಗರದ ಬೀಟ್-15ನೇ ವಾರ್ಡ್‌ನ ಸಾರ್ವಜನಿಕರು ದೂರು ಹಾಗೂ ಸಮಸ್ಯೆಗಳಿದ್ದರೆ ಎ.ಎಸ್.ಐ. ಹೆಚ್.ಬಿ.ನಾಗೇಶ್ ಮೊಬೈಲ್‌; 9483897962 ಹೆಡ್ ಕಾನ್‌ಸ್ಟೆಬಲ್ ಸುರೇಶ್ 9743791929 ಮಹಿಳಾ ಕಾನ್‌ಸ್ಟೆಬಲ್ ಉಮಾ ಮಹೇಶ್ವರಿ 7022452475 ಮಣಿಕಂಠ 9731137107 ಅವರನ್ನು ಸಂಪರ್ಕಿಸಬಹುದು ಎಂದು ಎಸ್‌ಪಿ ಬಿ.ಟಿ. ಕವಿತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.