ವಿದ್ಯುತ್ ಕಂಬ ಏರಿ ಕುಳಿತಿರುವುದು
ಕೊಳ್ಳೇಗಾಲ: ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ (27) ಎಂಬ ಮದ್ಯವ್ಯಸನಿ ಯುವಕ ಮಂಗಳವಾರ ಲಿಂಗಾಣಪುರ ಗ್ರಾಮದ ಜಮೀನಿನ ಬಳಿ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ತನ್ನ ತಾಯಿಯ ಕಣ್ಣೆದುರೇ ಪ್ರಾಣ ಬಿಟ್ಟಿದ್ದಾನೆ.
ಯುವಕ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಈತ ಮದ್ಯವ್ಯಸನಿ, ಮದುವೆ ಮಾಡಿಕೊಡುವಂತೆ ಮನೆಯಲ್ಲಿ ತಂದೆ ತಾಯಿಯನ್ನು ಪೀಡಿಸುತ್ತಿದ್ದ. ಇದಕ್ಕೆ ಮನೆಯವರು ‘ನೀನು ಕುಡಿತಬಿಡು ಮದುವೆ ಮಾಡುತ್ತೇವೆ’ ಎಂದು ಹೇಳುತ್ತಿದ್ದರು.
ಈ ವಿಚಾರವಾಗಿ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕಳೆದ ಮೂರು ದಿನಗಳಿಂದ ಗಲಾಟೆ ಮಾಡಿ ಹುಚ್ಚನಂತೆ ನಟಿಸುತ್ತಿದ್ದ. ಬೆಳಿಗ್ಗೆ ಮನೆಯಿಂದ ಬಂದ ಈತ ಲಿಂಗಾಣಪುರ ಬಳಿ ಜಮೀನಿನಲ್ಲಿ ಆಯ್ದು ಹೋಗಿರುವ ಹೈಟೆನ್ಷನ್ ವಿದ್ಯುತ್ ಕಂಬ ಏರಿದ. ಇದನ್ನು ಕಂಡು ಜಮೀನಿನ ಮಾಲೀಕ ಕೂಡಲೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ಸೆಸ್ಕ್ ಸಿಬ್ಬಂದಿಯೊಡನೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು ಹೈ ಟೆನ್ಷನ್ ಕಂಬ ಏರಿ ಕುಳಿತ್ತಿದ್ದ ಮಸಣಶೆಟ್ಟಿಯನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಈ ವೇಳೆ ತನ್ನ ತಾಯಿಯನ್ನು ಕರೆಸುವಂತೆ ಕೇಳಿಕೊಂಡಿದ್ದಾನೆ. ಸ್ಥಳಕ್ಕೆ ತಾಯಿ ಸಿದ್ದರಾಜಮ್ಮ ಬಂದ ಕೂಡಲೇ ಯಾರ ಮನವೊಲಿಕೆಗೂ ಜಗ್ಗದೆ ಆಕೆಯ ಕಣ್ಣೆದುರೇ ‘ಅವ್ವ ಅವ್ವಾ ನಾನೇ ಬರ್ತೇನೆ, ಕೆಳಗೆ ಹಿಡ್ಕೋ’ ಎಂದು ಹೇಳಿ ವಿದ್ಯುತ್ ಲೈನ್ ಹಿಡಿದು ಕ್ಷಣ ಮಾತ್ರದಲ್ಲಿ ಅಸುನೀಗಿದ್ದಾನೆ.
ಆ ಸಂದರ್ಭದಲ್ಲಿ ಹೈ-ಟೆನ್ಷನ್ ತಂತಿಯಲ್ಲಿ ವಿದ್ಯುತ್ ಪ್ರಸರಣ ಸ್ಥಗಿತಗೊಳಿಸಲಾಗಿತ್ತು. ಆದರೂ, ಸಹ ಇಂಡೆಕ್ಸ್ನಲ್ಲಿ ಶೇಖರಣೆಯಾಗಿದ್ದ ವಿದ್ಯುತ್ ಶಾಖಕ್ಕೆ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆ ನಂತರ ಮೃತದೇಹವನ್ನು ಕಂಬದಿಂದ ಸೆಸ್ಕ್ ಸಿಬ್ಬಂದಿ ಇಳಿಸಿ ನಗರದ ಸರ್ಕಾರಿ ಉಪವಿಭಾಗ ಆಸ್ಪತೆ ಶವಾಗಾರಕ್ಕೆ ತಂದಿಟ್ಟು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಂತರ ವಾರಸುದಾರರಿಗೆ ನೀಡಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.