ADVERTISEMENT

ಯಳಂದೂರು: ಚಾಮುಂಡೇಶ್ವರಿ ಕೊಂಡೋತ್ಸವ ಸಂಭ್ರಮ

ನವರಾತ್ರಿಗೂ ಮೊದಲ ಉತ್ಸವ: ದೇವಿ ಮಹೋತ್ಸವಕ್ಕೆ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:27 IST
Last Updated 15 ಸೆಪ್ಟೆಂಬರ್ 2025, 2:27 IST
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದ ಕೊಂಡೋತ್ಸವಕ್ಕೆ ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದ ಕೊಂಡೋತ್ಸವಕ್ಕೆ ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು   

ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಇಳಿ ಸಂಜೆಯ ಹೊತ್ತಿನಲ್ಲೂ ಭಕ್ತರ ಕಲರವ ಮುಗಿಲುಮುಟ್ಟಿತ್ತು. ದಿಗಂತದಲ್ಲಿ ಕೆಂಪು ವರ್ಣದ ನೇಸರ ಜಗದ ಜವಬ್ಧಾರಿ ಪೂರೈಸಿ ವಿಶ್ರಾಂತಿಗೆ ತೆರಳುತ್ತಿದ್ದಂತೆ ಕೊಂಡದ ಕಿಡಿ ಜ್ವಲಿಸುತ್ತಿತ್ತು. ಈ ವೇಳೆ ಅಪಾರ ಭಕ್ತರ ಜಯಘೋಷಗಳ ನಡುವೆ ಚಾಮುಂಡೇಶ್ವರಿ ಅಮ್ಮನವ ಕೊಂಡೋತ್ಸವ ಸಡಗರ ಸಂಭ್ರಮಗಳ ನಡುವೆ ವಿಜೃಂಭಣೆಯಿಂದ ಸಾಗಿತು.

ಶನಿವಾರ ಸಂಜೆಯಿಂದಲೇ ಗ್ರಾಮದಲ್ಲಿ ಎಲ್ಲೆಡೆ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳ ಅಲಂಕಾರ ಕಂಗೊಳಿಸಿದವು. ಸುಮಂಗಲೆಯರು ದೇವಳದ ಸುತ್ತಲೂ ಬಣ್ಣದ ರಂಗೂಲಿ ಹಾಕಿದ್ದರು. ಭಾನುವಾರ ಮುಂಜಾನೆ ಭಾದ್ರಪದ ಬಹುಳ ಸಪ್ತಮಿ ರೋಹಿಣಿ ನಕ್ಷತ್ರದಲ್ಲಿ ಆಗಮಿಕರು ಚಾಮುಂಡಾಂಬೆ ಸಮೇತ ಅಷ್ಟ ಮಾತೃಕೆಯರಿಗೆ ಬಗೆಬಗೆ ಹೂಗಳ ಸಿಂಗಾರ ಮಾಡಿದ್ದರು. ಬೆಳ್ಳಿ ಮತ್ತು ಚಿನ್ನದ ಅಲಂಕಾರದಲ್ಲಿ ಝಗಮಗಿಸುತ್ತಿದ್ದ ದೇವಿಯರಿಗೆ ನೈವೇದ್ಯ ಪೂರೈಸಿ, ಭಕ್ತರ ದರ್ಶನಕ್ಕೆ ಮುಕ್ತಗೊಳಿಸಿದರು. ಮಧ್ಯಾಹ್ನ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಮಯ ದೇಗುಲದಲ್ಲಿ ಹೋಮ ಹವನ, ಮಹಾ ಮಂಗಳಾರತಿ ಹಾಗೂ ಅಭಿಷೇಕ ಪೂಜೆ ನಡೆಯಿತು.

ಭಕ್ತರು ಸುವರ್ಣಾ ನದಿ ತಟದದಲ್ಲಿ ಮಿಂದು, ಮಡಿಯುಟ್ಟು ದೇವಿಗೆ ಹಣ್ಣುಕಾಯಿ ಪೂಜೆ ಸಲ್ಲಿಸಿ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ಧೂಪ ದೀಪ ಬೆಳಗಿ, ದೇವರ ದರ್ಶನ ಪಡೆದರು. ನಂತರ ತೀರ್ಥ ಪ್ರಸಾದ ಸೇವಿಸಿ ಧನ್ಯತೆ ಮೆರೆದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಪಲ್ಲಕ್ಕಿಯಲ್ಲಿ ವಿರಾಜಮಾನರಾದ ದೇವಿಯ ಉತ್ಸವ ಮೂರ್ತಿಯ ಜೊತೆ ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ಗುಡಿಯ ಮುಂಭಾಗ ಸಂಜೆ ನಡುವೆ ನಡೆದ ಕೊಂಡೋತ್ಸವದಲ್ಲಿ ಭಕ್ತರ ಕಲರವ ಮುಗಿಲು ಮುಟ್ಟಿತ್ತು. ಭಕ್ತರು ತೆಂಗಿನ ಮರ ಹಾಗೂ ಎತ್ತರದ ಪ್ರದೇಶ ಏರಿ ಉತ್ಸವವನ್ನು ಕಣ್ತುಂಬಿಕೊಂಡರು. ಹೆಬ್ಬರೆ ಶಬ್ಧ, ಮಂಗಳ ವಾದ್ಯದ ನೀನಾದ ನಡುವೆ ಯುವ ಜನರು ಹೆಜ್ಜೆಯಾಕಿದರು. ಸ್ತ್ರೀಯರು ಮತ್ತು ಮಕ್ಕಳು ಆರತಿ ತಟ್ಟೆ ಹಿಡಿದು, ದೇವರನ್ನು ಎದುರುಗೊಂಡು ತಂಪಿನ ಆರತಿ ಬೆಳಗಿದರು. ಸಪ್ತ ಸಹೋದರಿಯರ ಸಂಗಡ ಚಾಮುಂಡೇಶ್ವರಿ ಉತ್ಸವ ಸಾಗುವಾಗ ಭಕ್ತರು ಹೂ, ಹಣ್ಣು ತೂರಿ ಸಂಭ್ರಮಿಸಿದರು. ಅರ್ಚಕರು ಕೊಂಡಕ್ಕೆ ಚಾಲನೆ ನೀಡುತ್ತದ್ದಂತೆ ಭಕ್ತರು ನಿಗಿನಿಗಿ ಕೆಂಡದ ನಡುವೆ ಹಾಯ್ದರು, ಭಕ್ತ ಸಮೂಹ ಧೂಪ ತೂರಿ, ಆಲಯದ ಸುತ್ತಲೂ ಊದಿನ ಕಡ್ಡಿ ಬೆಳಗಿ ಸುಗಂಧ ತುಂಬಿದರು. ಅಪಾರ ಭಕ್ತರ ಜಯಘೋಷಗಳ ನಡುವೆ ದೇವಿಯ ಭಕ್ತರು ದೇವಳ ಪ್ರವೇಶಿಸಿ ತೀರ್ಥ ಚಿಮುಕಿಸಿಕೊಂಡು ಧನ್ಯತೆ ಮೆರೆದರು.

‘ಕೊಂಡೋತ್ಸವದ ನಂತರ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಮಂಗಳವಾದ್ಯ ಮೊಳಗಿಸಿ ಸತ್ತಿಗೆ ಸೂರಿಪಾನಿ ಮತ್ತು ಹೆಬ್ಬರೆ ಸಮೇತ ಭಕ್ತರು ಜನಪದ ನೃತ್ಯ ಮಾಡುತ್ತ ಸಾಗಿದರು. ಎರಡು ತಿಂಗಳಿಂದ ಆಯೋಜಿಸಿದ್ದ ಧಾರ್ಮಿಕ ಆಚರಣೆಗಳು ಸಂಪನ್ನಗೊಂಡವು’ ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮಸ್ಥರು, ಸಂಘ-ಸಂಸ್ಥೆಯ ಮುಖಂಡರು ಹಾಗೂ ಪೊಲೀಸರು ಭಾಗವಹಿಸಿದ್ದರು.

ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದ ಕೊಂಡೋತ್ಸವದಲ್ಲಿ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದ ಕೊಂಡೋತ್ಸವದಲ್ಲಿ ಚಾಮುಂಡಾಂಬೆಯ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತು ಸಾಗಿದರು.
ಚಾಮುಂಡೇಶ್ವರಿ ಭಕ್ತರ ಜಯಘೋಷಗಳ ನಡುವೆ ಉತ್ಸವ ಮೂರ್ತಿ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.