ADVERTISEMENT

ಚಂಗಡಿ ಪುನರ್ವಸತಿ: ಮಾಸ್ಟರ್ ಪ್ಲಾನ್ ಸಿದ್ಧ

ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 16:37 IST
Last Updated 2 ಸೆಪ್ಟೆಂಬರ್ 2021, 16:37 IST
ಚಂಗಡಿ ಗ್ರಾಮ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು
ಚಂಗಡಿ ಗ್ರಾಮ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು   

ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮವ್ಯಾಪ್ತಿಯಲ್ಲಿ ಬರುವ ಚಂಗಡಿ ಗ್ರಾಮವನ್ನು ಹನೂರು ಭಾಗದ ಡಿಎಂ ಸಮುದ್ರ ವೈಶಂಪಾಳ್ಯ ಬಳಿಗೆ ಸ್ಥಳಾಂತರಿಸುವ ಸಂಬಂಧ ಪುನರ್‌ವಸತಿ ಗ್ರಾಮದ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ.

ಚಂಗಡಿ ಗ್ರಾಮ ಪುನರ್ವಸತಿ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆ ಗುರುವಾರ ನಡೆದಿದ್ದು, ಚಂಗಡಿ ಗ್ರಾಮ ಪುನರ್ವಸತಿಗಾಗಿ ಈಗಾಗಲೇ ಪೂರ್ಣಗೊಳಿಸಿರುವ ಕುಟುಂಬಗಳು, ಜಮೀನುಗಳ ಸಮೀಕ್ಷೆ ಮತ್ತು ಅರಣ್ಯ ಹಾಗೂ ಕಂದಾಯ ಇಲಾಖೆಗಳು ಬದಲಿ ಜಾಗದ ಸರ್ವೆ ಕೆಲಸವನ್ನು ಜಂಟಿ ಸಮೀಕ್ಷೆಯ ಮೂಲಕ ಪೂರ್ಣಗೊಳಿಸಿ ಸಿದ್ಧಪಡಿಸಿರುವ ಪುನರ್ವಸತಿ ಗ್ರಾಮದ ಮಾಸ್ಟರ್ ಪ್ಲಾನ್ ಅನ್ನು ಸೋಮವಾರ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

‘ಪುನರ್ವಸತಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೂ ಅವಕಾಶವಾಗಬೇಕು. ಪಶುಸಂಗೋಪನೆ ಚಟುವಟಿಕೆ ಸೇರಿದಂತೆ ಇತರೆ ಸೌಲಭ್ಯಗಳಿಗೆ ಲಭ್ಯವಿರುವ ಜಾಗದಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಅವರು ತಿಳಿಸಿದರು.

ಕೃಷಿ ಇಲಾಖೆಯಿಂದ ಚೆಕ್ ಡ್ಯಾಂಗಳು, ಕೃಷಿ ಹೊಂಡ, ಕೆರೆ ಅಭಿವೃದ್ದಿಯಂತಹ ಕಾಮಗಾರಿಯನ್ನು ನಿರ್ವಹಿಸಿ ಅಂತರ್ಜಲ ವೃದ್ಧಿಸುವ ಕೆಲಸವಾಗಬೇಕು. ಈ ಸಂಬಂಧ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆಯೂ ಸೂಚಿಸಿದರು.

ADVERTISEMENT

ತೋಟಗಾರಿಕೆ ಇಲಾಖೆಯ ವಿವಿಧ ತಳಿಗಳ ಸಸಿಗಳನ್ನು ನೀಡುವ ಸಲುವಾಗಿ ನರ್ಸರಿ ಅಭಿವೃದ್ಧಿ ಪಡಿಸಬೇಕು. ಮೀನುಗಾರಿಕೆ, ಪಶುಸಂಗೋಪನೆ ಇಲಾಖೆ ಇತರೆ ಇಲಾಖೆಗಳು ರೈತರಿಗೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ನೆರವು ನೀಡುವ ಸಂಬಂಧ ಸೂಕ್ತ ಯೋಜನೆ ತಯಾರಿಸಿ ನೀಡಬೇಕು ಎಂದು ಡಾ.ಎಂ.ಆರ್.ರವಿ ಅವರು ತಿಳಿಸಿದರು.

ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಏಡುಕುಂಡಲು ಅವರು ಪುನರ್ವಸತಿ ಗ್ರಾಮದ ಮಾಸ್ಟರ್ ಪ್ಲಾನ್ ಕುರಿತು ವಿವರಿಸಿದರು.

ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಉಪರಣ್ಯ ಸಂರಕ್ಷಾಣಾಧಿಕಾರಿ ಡಾ. ಸಂತೋಷ್ ಕುಮಾರ್, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮಲ್ಲೇಶಪ್ಪ, ರೈತ ಮುಖಂಡ ಹೊನ್ನೂರು ಪ್ರಕಾಶ್, ಗ್ರಾಮದ ಮುಖಂಡ ಕರಿಯಪ್ಪ, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಹನೂರು ತಹಶೀಲ್ದಾರ್‌ರಾದ ಜಿ.ಎಚ್.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.