
ಕೊಳ್ಳೇಗಾಲ: ಮಂಟೇಸ್ವಾಮಿ ಪರಂಪರೆಯ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ನಾಲ್ಕು ದಿನಗಳಷ್ಟೆ ಬಾಕಿ ಇದ್ದು ತಾಲ್ಲೂಕು ಆಡಳಿತ ಹಾಗೂ ಸಿದ್ದಪ್ಪಾಜಿ ಮಠದ ಆಡಳಿತದ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ವಿಶಿಷ್ಟ ಆಚರಣೆ ಹಾಗೂ ವಿಭಿನ್ನ ಸಂಸ್ಕೃತಿಯ ಪ್ರತೀಕವಾಗಿರುವ ಚಿಕ್ಕಲ್ಲೂರು ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಮಂಟೇಸ್ವಾಮಿ ಸಿದ್ದಪ್ಪಾಜಿ ಒಕ್ಕಲಿನವರು ಆಚರಣೆ ಮಾಡುವ ಈ ಜಾತ್ರೆ ವಿಶಿಷ್ಟವಾಗಿದ್ದು ಜ.3 ರಿಂದ 7ರವರೆಗೆ ಐದು ದಿನಗಳ ವಿಜೃಂಭಣೆಯಿಂದ ನಡೆಯಲಿದೆ.
3ರಂದು ರಾತ್ರಿ ಜರುಗುವ ಚಂದ್ರಮಂಡಲೋತ್ಸವದ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಏಳು ಗ್ರಾಮಗಳಾದ ಬಾಣೂರು, ಬಾಳಗುಣಸೆ, ತೆಳ್ಳನೂರು, ಮಸ್ಕಯ್ಯನ ದೊಡ್ಡಿ, ಸುಂಡ್ರಳ್ಳಿ, ಕೊತ್ತನೂರು ಗ್ರಾಮಗಳ ಕುಲೇಳು 18 ಸಮುದಾಯಗಳು ಒಟ್ಟಾಗಿ ಸೇರಿ ಆಚರಿಸುವ ಜಾತ್ರೆಯಲ್ಲಿ ಚಂದ್ರಮಂಡಲೋತ್ಸವಕ್ಕೆ ಮಹತ್ವವಿದೆ.
ಈ ಉತ್ಸವಕ್ಕೆ ಒಂದೊಂದು ಸಮುದಾಯದವರು ಒಂದೊಂದು ಬಗೆಯ ಸೇವೆ ಸಲ್ಲಿಸುವುದು ಸಂಪ್ರದಾಯ. ಚಂದ್ರಮಂಡಲ ಎಂಬ ಬಿದಿರಿನ ಆಕೃತಿ ನಿರ್ಮಾಣಕ್ಕೆ ತೆಳ್ಳನೂರು ಗ್ರಾಮದ ಜನರು ಬೊಂಬು ಬಿದಿರುಗಳನ್ನು ನೀಡುತ್ತಾರೆ. ಮಸ್ಕಯ್ಯನ ದೊಡ್ಡಿ ಗ್ರಾಮಸ್ಥರು ಎಣ್ಣೆ ಪಂಜು ಕೊಡುತ್ತಾರೆ. ಮಡಿ ಬಟ್ಟೆಯನ್ನು ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರು ನೀಡುತ್ತಾರೆ. ಹೀಗೆ ಸಪ್ತ ಗ್ರಾಮಗಳು ನೀಡುವ ವಸ್ತುಗಳನ್ನು ಸಂಗ್ರಹಿಸಿ ಗುರುಮನೆ ನೀಲಗಾರರು ಚಂದ್ರಮಂಡಲವನ್ನು ತಯಾರಿಸುವುದು ಜಾತ್ರೆಯ ವಿಶೇಷ.
ಐದು ಹಗಲು ಐದು ರಾತ್ರಿ ಆಚರಣೆ: ಐದು ದಿನ ನಡೆಯುವ ಜಾತ್ರೆಯಲ್ಲಿ ಜಿಲ್ಲೆ, ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಿಂದಲು ಸಿದ್ದಪ್ಪಾಜಿ ಒಕ್ಕಲಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಾಡಿಕೆ. ಕುಟುಂಬ ಸಮೇತರಾಗಿ ಜಾತ್ರೆಗೆ ಬಂದು ಇಲ್ಲಿಯೇ ವಾಸ್ತವ್ಯ ಹೂಡಿ ಸಿದ್ದಪ್ಪಾಜಿಗೆ ಹರಕೆ ಸೇವೆ ಸಲ್ಲಿಸುತ್ತಾರೆ. ಐದು ಹಗಲು ಹಾಗೂ ಐದು ರಾತ್ರಿ ಜಾತ್ರೆ ನಡೆಯುವುದು ವಿಶೇಷ.
ಜಾತ್ರೆ ಮುಗಿದ ನಂತರವೂ 15 ದಿನಗಳವರೆಗೆ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಜ.3ರಂದು ಚಂದ್ರಮಂಡಲೋತ್ಸವ, 4ರಂದು ಹುಲಿವಾಹನೋತ್ಸವ ದೊಡ್ಡವರ ಸೇವೆ, 5ರಂದು ರುದ್ರಾಕ್ಷಿ ಮಂಟಪೋತ್ಸವ ಮುಡಿಸೇವೆ ಅಥವಾ ನೀಲಗಾರರ ದೀಕ್ಷೆ, 6ರಂದು ಗಜವಾಹನೋತ್ಸವ ಪಂಕ್ತಿ ಸೇವೆ, ಕೊನೆಯ ದಿನ 7ರಂದು ಮುತ್ತುರಾಯರ ಸೇವೆ ಅಥವಾ ಕಡೆ ಬಾಗಿಲು ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಪಂಕ್ತಿ ಸೇವೆಯಂದು ಭಕ್ತರು ಕುಟುಂಬ ಸಮೇತ ಮಾಂಸದ ಅಡುಗೆ ಸಿದ್ಧಪಡಿಸಿ ಸಿದ್ದಪ್ಪಾಜಿಗೆ ಎಡೆಇಟ್ಟು ನಂತರ ಸಹಭೋಜನ ಸ್ವೀಕರಿಸಲಿದ್ದಾರೆ. ಈ ಪದ್ಧತಿ ದಶಕಗಳಿಂದಲೂ ನಡೆದುಕೊಂಡು ಬಂದಿದೆ.
ಚಿಕ್ಕಲ್ಲೂರಿನಲ್ಲೇ ಸಿದ್ದಪ್ಪಾಜಿಯ ನೆಲೆ: ಸಿದ್ದಪ್ಪಾಜಿಯು ಪಾಂಚಾಳರು ಒಡ್ಡುವ ಸವಾಲು, ಪವಾಡಗಳನ್ನು ಗೆದ್ದು ಏಳು ಊರುಗಳ ಪಾಳೆಪಟ್ಟುಗಳನ್ನು ಒಕ್ಕಲು ಪಡೆದು ಚಿಕ್ಕಲೂರಿನಲ್ಲಿ ನೆಲೆಸುತ್ತಾರೆ. ಹಾಗಾಗಿ ಏಳು ಊರುಗಳ ಜನರು ಒಗ್ಗೂಡಿ ವಿಜೃಂಭಣೆಯಿಂದ ಚಿಕ್ಕಲೂರು ಜಾತ್ರೆ ಆಚರಿಸುತ್ತಾರೆ. ವರ್ಷದ ಮೊದಲ ಜಾತ್ರೆ ಎಂದು ಪ್ರಸಿದ್ಧ ಪಡೆದಿರುವ ಚಿಕ್ಕಲ್ಲೂರು ಜಾತ್ರೆ ಸಮೃದ್ಧಿಯ ಸಂಕೇತವಾಗಿಯೂ ಗಮನ ಸೆಳೆದಿದೆ. ಕೃಷಿ ಚಟುವಟಿಕೆಗಳು ಮುಗಿದು ದವಸ ಧಾನ್ಯಗಳನ್ನು ಮನೆಗಳಿಗೆ ತುಂಬಿಕೊಳ್ಳುವ ಕೃಷಿ ಸಮುದಾಯಗಳಿಗೆ ಜಾತ್ರೆ ಸಮೃದ್ಧಿಯ ಸಂಕೇತವಾಗಿದೆ.
- ಪಂಕ್ತಿ ಸೇವೆಯಲ್ಲಿ ಎಲ್ಲ ಜಾತಿ ಸಮುದಾಯಗಳಿಂದ ಸಹಭೋಜನ ಏಳು ಊರುಗಳ ಜನರು ಒಟ್ಟಾಗಿ ಆಚರಿಸು ಜಾತ್ರೆ ಚಿಕ್ಕಲ್ಲೂರಿನಲ್ಲಿ ಮನೆಮಾಡಿದ ಜಾತ್ರಾ ಸಂಭ್ರಮ
ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದುಗುರುಶಾಂತಪ್ಪ ಬೆಳ್ಳುಂಡಗಿ ತಾಲ್ಲೂಕು ಪಂಚಾಯಿತಿ ಇಒ
ಜಾತ್ರೆಗೆ ಬರುವ ಭಕ್ತರಿಗೆ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆಬಸವರಾಜು ತಹಶೀಲ್ದಾರ್
ಜಾತ್ರೆಗೆ ತಾಲ್ಲೂಕು ಆಡಳಿತ ಸಿದ್ಧತೆ ಚಿಕ್ಕಲ್ಲೂರು ಜಾತ್ರೆಗೆ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಕುಡಿಯುವ ನೀರು ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಭಕ್ತರು ತಂಗುವ ಸ್ಥಳ ಮುಡಿ ತೆಗೆಯುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸಲಾಗುತ್ತಿದೆ. ತೆಳ್ಳನೂರು ಗ್ರಾಮ ಪಂಚಾಯಿತಿಯಿಂದ ಚರಂಡಿ ಹಾಗೂ ಗಿಡ ಗಂಟೆಗಳ ಸ್ವಚ್ಛತಾ ಕಾರ್ಯ ನಡೆದಿದೆ. ಅಂಗಡಿ ಹಾಗೂ ಹೋಟೆಲ್ಗಳನ್ನು ಹಾಕಲು ಜಾಗ ಗುರುತು ಮಾಡಿ ಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.