ADVERTISEMENT

ಬದಲಾದ ಹವಾಮಾನ: ಮಾವು ಬೆಳೆ ಪ್ರಕ್ರಿಯೆ ವಿಳಂಬ, ಬೆಲೆ ಹೆಚ್ಚಳ ನಿಚ್ಚಳ

ಗ್ರಾಹಕರ ಕೈಸೇರುವುದು ಈ ಬಾರಿ ತಡ

ನಾ.ಮಂಜುನಾಥ ಸ್ವಾಮಿ
Published 12 ಮಾರ್ಚ್ 2022, 19:31 IST
Last Updated 12 ಮಾರ್ಚ್ 2022, 19:31 IST
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ತಡವಾಗಿ ಹೂ ಬಿಟ್ಟಿರುವ ಮಾವಿನ ಗಿಡ
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ತಡವಾಗಿ ಹೂ ಬಿಟ್ಟಿರುವ ಮಾವಿನ ಗಿಡ   

ಯಳಂದೂರು: ಕಳೆದ ವರ್ಷ ಹಿಂಗಾರು ಮಳೆ ಅವಧಿ ವಿಸ್ತರಿಸಿದ್ದು ಹತ್ತಾರು ಬೆಳೆಗಳ ಮೇಲೆ ಪ್ರಭಾವಬೀರಿದೆ. ಈ ವರ್ಷ ಮಾವು ಬೆಳೆಯ ಪ್ರಕ್ರಿಯೆ ವಿಳಂಬವಾಗಿದ್ದು, ಇಳುವರಿ ಕುಸಿಯುವುದು ನಿಚ್ಚಳವಾಗಿದೆ.

ಮಾವಿನ ಮರಗಳು ಇನ್ನೂ ಪೂರ್ಣವಾಗಿ ಹೂ ಬಿಟ್ಟಿಲ್ಲ. ಹೂ ಬಿಟ್ಟಿರುವ ಮಾವಿನ ಮರ, ಗಿಡಗಳಲ್ಲಿ ಇನ್ನೂ ಮಿಡಿ ಮಾವಿನಕಾಯಿ ಮೂಡಿಲ್ಲ. ಈ ಬಾರಿ ಬೆಳೆ ಸಕಾಲಕ್ಕೆ ಬರುವುದಿಲ್ಲ. ಹೀಗಾಗಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗುವ ನಿರೀಕ್ಷೆಇದೆ.

ತಾಲ್ಲೂಕಿನಲ್ಲಿ ಹೊಸ ತಳಿ ಮಾವಿನ ಗಿಡಗಳನ್ನು ನೆಡುವತ್ತ ಯುವರೈತರು ಚಿತ್ತಹರಿಸಿದ್ದಾರೆ. ಕಳೆದ ವರ್ಷ ಉತ್ತಮ ಫಸಲು ಬೆಳೆಗಾರರಕೈಸೇರಿತ್ತು. ಕೋವಿಡ್‌ ನಡುವೆಯೂ ಕೆಲವು ಬೆಳೆಗಾರರು ಆನ್‌ಲೈನ್‌ ಮೂಲಕ ಗ್ರಾಹಕರನ್ನುಕಂಡುಕೊಂಡಿದ್ದರು. ಕಳೆದ ಮುಂಗಾರು, ಹಿಂಗಾರು ಮಳೆಗಾಲ ದೀರ್ಘವಾಗಿ ಕಾಡಿತ್ತು. ಇದು ಮಾವುಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಾವು ಕೊಯ್ಲಿನ ಅವಧಿಯನ್ನುಮುಂದೂಡಿದೆ.

ADVERTISEMENT

‘ಫೆಬ್ರುವರಿ ಮೊದಲ ವಾರ ಹೂ ಬಿಟ್ಟು, ಏಪ್ರಿಲ್-ಜುಲೈ ನಡುವೆ ಮಾವಿನ ಸುಗ್ಗಿ ಕಳೆಗಟ್ಟುತ್ತಿತ್ತು. ಈ ಬಾರಿ ಬೆಳೆ ತಡವಾಗಿದೆ. ಮರದಲ್ಲಿ ಇನ್ನೂ ಹೂ, ಹೀಚುಕಾಯಿ ಏಕಕಾಲದಲ್ಲಿ ಕಂಡುಬಂದಿದೆ. ಹಾಗಾಗಿ, ಗ್ರಾಹಕರ ಕೈ ಸೇರಲು ನಿಧಾನ ಆಗಲಿದೆ. ನಿರೀಕ್ಷಿಸಿದಷ್ಟು ಹಣ್ಣೂ ಸಿಗುವುದಿಲ್ಲ. ಇದರಿಂದ ಮಾವು ಕೃಷಿಕರ ಆದಾಯ ಕೈತಪ್ಪಲಿದೆ’ ಎಂದು ಪಟ್ಟಣದ ಕೃಷಿಕ ಸುರೇಶ್ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

‘ಕಳೆದ ವರ್ಷ ಫಲ ಬಿಡದ ಜಾತಿಗಳು ಈ ವರ್ಷ ಹೆಚ್ಚಿನ ಕಾಯಿಗಳನ್ನು ಬಿಟ್ಟಿವೆ. ವೈವಿಧ್ಯಮಯ ತಳಿಗಳ ಗಿಡಗಳು ಅಕಾಲದಲ್ಲೂ ಕಾಯಿ ನೀಡುತ್ತವೆ. ಈ ವರ್ಷ ಹೊಸ ಪ್ರಭೇದದಪೈಕಿ ಇಮಾಮ್ ಪಸಂದ್ ಮತ್ತು ದಶೇರಿ ಹೆಚ್ಚು ಫಲ ಕಚ್ಚಿದೆ. ಇವುಗಳಿಗೆ ಹೆಚ್ಚು ಬೇಡಿಕೆಯೂ ಇದೆ. ಈ ತಳಿಗಳು ಸವಿರುಚಿ, ಸುವಾಸನೆ, ರಸಭರಿತ ಗುಣಗಳನ್ನುಹೊಂದಿವೆ. ಹೆಚ್ಚು ಬೆಲೆ ಮತ್ತು ಬೇಡಿಕೆ ಇರುವುದರಿಂದ ಬೆಳೆಗಾರರು ಉತ್ತಮ ಬೆಲೆ ನಿರೀಕ್ಷಿಸಬಹುದು’ ಎಂದುಕೆಸ್ತೂರು ಲೋಕೇಶ್ ಅವರು ತಿಳಿಸಿದರು.

‘ಕಳೆದ ವರ್ಷ 400 ಸಸಿಗಳಿಂದ 5 ಟನ್ ಇಳುವರಿ ಬಂದಿತ್ತು. ಈ ವರ್ಷ ಸರ್ವ
ಋತುಗಳಲ್ಲೂ ಫಲ ನೀಡುವ ತಳಿಗಳು ಕಾಯಿ ಬಿಟ್ಟಿವೆ. 10 ಟನ್ ಮಾವು ಇಳುವರಿಯ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.

ಳುವರಿ ಕುಸಿತ ಖಚಿತ

’ಕಳೆದ ವರ್ಷ ನವೆಂಬರ್‌ವರೆಗೆ ಮಳೆ ಸುರಿಯಿತು. ಮಾವು ತೋಟಗಳಲ್ಲಿ ಹೆಚ್ಚು ನೀರುಸಂಗ್ರಹವಾಗಿ, ತೇವಾಂಶದಲ್ಲೂ ಏರಿಕೆ ಕಂಡಿತು. ತಿಂಗಳುಗಟ್ಟಲೆ ವರ್ಷಧಾರೆಯಾದ ಕಾರಣಮಣ್ಣಿನಲ್ಲೂ ಶೀತ ಸೇರಿತು. ಹೂ ಅರಳಿಸಲು ಪೂರಕ ಪರಿಸ್ಥಿತಿ ಇದ್ದರೂ, ವಾತಾವರಣದಲ್ಲಿಉಂಟಾದ ವ್ಯತ್ಯಯದಿಂದ ಹೂ ಬಿಡುವ ಸಮಯ ಹಾಗೂ ಕಾಯಿ ಕಚ್ಚುವ ಪ್ರಕ್ರಿಯೆಯಲ್ಲಿ
ನಿಧಾನವಾಯಿತು‘ ಎಂದುತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

‘ಈ ವರ್ಷ ಮಾವಿನ ಇಳುವರಿ ಬಹುತೇಕ ಕುಸಿಯಲಿದೆ. ಇದನ್ನು
‘ಮಾವಿನ ಇಳಿವರ್ಷ’ ಎಂದು ಗುರುತಿಸಬಹುದು. 2018ರಲ್ಲೂ ಇದೇ ರೀತಿ ಹವಾಮಾನ ವೈಪರೀತ್ಯ ಕಂಡು ಬಂದಿತ್ತು. ಮಾವುಬೆಳೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು’ ಎಂದು ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.