ADVERTISEMENT

ವಿದ್ಯಾರ್ಥಿ ನಿಲಯಗಳಲ್ಲಿ ಹಸಿರ ಸಿರಿ!

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸದ್ಬಳಕೆಯಾಗುತ್ತಿದೆ ಹಿಂದುಳಿದ ವರ್ಗಗಳ ಇಲಾಖೆಯ ಅನುದಾನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 11:24 IST
Last Updated 14 ಮಾರ್ಚ್ 2020, 11:24 IST
ಚಾಮರಾಜನಗರಕ್ಕೆ ಹೋಗುವ ರಸ್ತೆ ಬದಿ, ಆದರ್ಶ ವಿದ್ಯಾಲಯದ ಸಮೀಪ ಇರುವ ವಿದ್ಯಾರ್ಥಿ ನಿಲಯದ ಊಟದ ಹಾಲ್‌ನ ನೋಟ
ಚಾಮರಾಜನಗರಕ್ಕೆ ಹೋಗುವ ರಸ್ತೆ ಬದಿ, ಆದರ್ಶ ವಿದ್ಯಾಲಯದ ಸಮೀಪ ಇರುವ ವಿದ್ಯಾರ್ಥಿ ನಿಲಯದ ಊಟದ ಹಾಲ್‌ನ ನೋಟ   

ಗುಂಡ್ಲುಪೇಟೆ: ಸರ್ಕಾರಿ ವಿದ್ಯಾರ್ಥಿ ನಿಲಯಗಳೆಂದರೆ ಸೌಕರ್ಯಗಳ ಕೊರತೆ ಇರುವ ಸ್ಥಳ, ಸ್ವಚ್ಛತೆ ಇರುವುದಿಲ್ಲ, ಅಶುದ್ಧ ವಾತಾವರಣ... ಎನ್ನುವ ಭಾವನೆ ಜನರಲ್ಲಿದೆ.

ಆದರೆ, ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ.ದೇವರಾಜು ಅರಸು ವಿದ್ಯಾರ್ಥಿ ನಿಲಯಗಳು ಈ ಆಪಾದನೆಗಳಿಂದ ದೂರವಿದ್ದು, ಮಾದರಿ ವಿದ್ಯಾರ್ಥಿನಿಲಯ ಎನಿಸಿಕೊಳ್ಳುತ್ತಿವೆ.

ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನಿರ್ವಹಿಸುತ್ತಿರುವ ನಾಲ್ಕು ವಿದ್ಯಾರ್ಥಿ ನಿಲಯಗಳಿವೆ. ಪಟ್ಟಣ ವ್ಯಾಪ್ತಿಯಲ್ಲಿ ಎರಡು ಬಾಲಕರ ಹಾಗೂ ಒಂದು ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಬೇಗೂರು ಹೋಬಳಿಯ ಗರಗನಹಳ್ಳಿ ಬಳಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಇವೆ. ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಹಸಿರು ವಾತಾವರಣ ನಿರ್ಮಿಸಲು ಒತ್ತು ನೀಡಲಾಗಿದೆ.

ADVERTISEMENT

ನಿಲಯದಆವರಣದಲ್ಲಿ ಪಪ್ಪಾಯಿ, ನಿಂಬೆ, ಬಾಳೆ, ಟೊಮೆಟೊ, ಮೆಣಸಿನ ಕಾಯಿ ಮತ್ತು ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣು, ತರಕಾರಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಸಿ ಹಸಿರು ಪರಿಸರ ನಿರ್ಮಾಣ ಮಾಡಿದ್ದಾರೆ.ಅಡುಗೆಗೆ ಅಗತ್ಯವಿರುವಅರ್ಧದಷ್ಟು ತರಕಾರಿಗಳನ್ನು ನಿಲಯದಲ್ಲೇ ಬೆಳೆದುಕೊಳ್ಳುತ್ತಾರೆ. ಊಟಕ್ಕೆ ಬೇಕಾಗುವ ಬಾಳೆಹಣ್ಣು ಸಹ ಇಲ್ಲೆ ಸಿಗುತ್ತದೆ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಇವುಗಳ ನಿರ್ವಹಣೆಯಲ್ಲಿ ತೊಡಗುತ್ತಾರೆ.

‘ನಿಲಯದ ಕಾಂಪೌಂಡ್ ಸುತ್ತ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಮಾಹಿತಿ ನೀಡಲಾಗಿದೆ. ಕವಿಗಳ ಚಿತ್ರ ಬರೆಯಲಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ಎಂದು ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಲಿಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನಲ್ಲಿ ಬಟ್ಟೆಗಳನ್ನು ಒಗೆಯುತ್ತಾರೆ ಎಂದು ಶೆಡ್ ನಿರ್ಮಾಣ ಮಾಡಿ ಕೂಲಿಂಗ್ ಶೀಟುಗಳನ್ನು ಅಳವಡಿಸಿ ಸೌಲಭ್ಯಗಳಿಗೆ ಕೊರತೆಯಾಗದಂತೆ ವ್ಯಾಸಂಗಕ್ಕೆ ಅನುಕೂಲಕಲ್ಪಿಸಿಕೊಡಲಾಗಿದೆ’ಎನ್ನುತ್ತಾರೆ ಅವರು.

‘ಅನೇಕವರ್ಷಗಳಿಂದ ಈ ಹಾಸ್ಟೆಲ್‌ಗಳಲ್ಲಿ ಸಮಸ್ಯೆಗಳಿತ್ತು. ಇಲಾಖೆಯ ವಿಸ್ತರಣಾಧಿಕಾರಿ ಲಿಂಗರಾಜು ಅವರಿಗೆ ನಿಲಯಗಳ ನಿರ್ವಹಣೆ ನೀಡಿದಾಗ ಸಮಸ್ಯೆಗಳನ್ನು ಅವರಿಗೆ ವಿವರಿಸಲಾಯಿತು. ನಂತರದ ದಿನಗಳಲ್ಲಿಆದ್ಯತೆಗೆ ಅನುಸಾರವಾಗಿ ಹೊಸ ಸೌಲಭ್ಯಗಳನ್ನು ಕಲ್ಪಿಸಿದರು’ ಎಂದು ಇಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.