ADVERTISEMENT

ಗೆದ್ದು ಬಂದವರು | ಹೆದರಬೇಕಿಲ್ಲ, ಎಚ್ಚರಿಕೆ ಇದ್ದರೆ ಸಾಕು

ಕೋವಿಡ್‌ ಗೆದ್ದವರ ಕಥೆಗಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 11:50 IST
Last Updated 1 ಆಗಸ್ಟ್ 2020, 11:50 IST

ಕೊಳ್ಳೇಗಾಲ: ಕೋವಿಡ್‌–19ನಿಂದ ಗುಣಮುಖರಾಗಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೊಳ್ಳೇಗಾಲದ ಮಣಿಕಂಠ ಅವರು ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಕೋವಿಡ್‌–19 ಎಂದರೆ ಜನರು ಬೆಚ್ಚಿಬೀಳುತ್ತಿದ್ದಾರೆ. ನನ್ನ ಅನಿಸಿಕೆ ಪ್ರಕಾರ ಬೆಚ್ಚಿಬೀಳುವ ಅಗತ್ಯವಿಲ್ಲ; ಎಚ್ಚರಿಕೆ ಇದ್ದರೆ ಸಾಕು.

10 ದಿನಗಳ ಹಿಂದೆ ನನ್ನ ಮಾವನವರಿಗೆ ಜ್ವರ ಬಂತು, ಅವರನ್ನು ನಗರದ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋದೆ. ವೈದ್ಯರು ಕೋವಿಡ್-19 ಪರೀಕ್ಷೆ ಮಾಡಿಸಿ ಎಂದರು. ಪರೀಕ್ಷೆ ಮಾಡಿಸಿದಾಗ ಸೋಂಕು ಧೃಡಪಟ್ಟಿತು. ನಾನು ಪರೀಕ್ಷೆ ಮಾಡಿಸಿಕೊಂಡಾಗ ನನ್ನಲ್ಲೂ ಕೋವಿಡ್‌–19 ಇರುವುದು ಪತ್ತೆಯಾಯಿತು.

ADVERTISEMENT

ಸ್ವಲ್ಪ ಹೊತ್ತು ಆತಂಕವಾಯಿತು. ನಂತರ ನಾನೇ ಧೈರ್ಯ ಮಾಡಿಕೊಂಡೆ.ನಮಗೆ ಕೋವಿಡ್ ಇರುವ ವಿಷಯ ತಿಳಿದ ಬಡಾವಣೆಯವರು ಹಾಗೂ ನನ್ನ ಸ್ನೇಹಿತರು ಧೈರ್ಯ ತುಂಬಿದರು. ಇದರಿಂದಾಗಿ ನನ್ನಲ್ಲಿದ್ದ ಅಲ್ಪ ಸ್ವಲ್ಪ ಭಯವೂ ದೂರವಾಯಿತು.

ಕೋವಿಡ್ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಲಿದ್ದ ಸೋಂಕಿತರು ಕೂಡ ಆತ್ಮ ಸ್ಥೈರ್ಯ ತುಂಬುವ ಮಾತನಾಡಿದರು. ‘ಏಕೆ ಭಯ ಪಡುತ್ತೀರಾ? ಏನು ಆಗುವುದಿಲ್ಲ. ನಮ್ಮ ಜೊತೆ ಇರಿ. ನಾವು ನಿಮ್ಮ ಜೊತೆ ಇದ್ದೇವೆ’ ಎಂದು ಹೇಳಿದರು. ಒಂದು ದಿನದಲ್ಲಿ ನನ್ನಲ್ಲಿದ್ದ ಆತಂಕವೆಲ್ಲವೂ ದೂರವಾಯಿತು. ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಊಟ, ಬಿಸಿ ನೀರು, ಮಾತ್ರೆಗಳನ್ನು ತಂದು ಕೊಡುತ್ತಿದ್ದರು. ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಚೆನ್ನಾಗಿ ನೋಡಿಕೊಂಡರು.

ಕೋವಿಡ್‌ ಕೇರ್‌ ಕೇಂದ್ರದಲ್ಲಿ ಇರುವಷ್ಟು ದಿನವೂ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬರಲಿಲ್ಲ. 10 ದಿನಗಳ ಬಳಿಕ ಮನೆಗೆ ಕಳುಹಿಸಿದರು. ಜನರು ಸ್ವಲ್ಪ ಮುಂಜಾಗ್ರತೆ ವಹಿಸಿದರೆ, ಸೋಂಕನ್ನು ಮೆಟ್ಟಿ ನಿಲ್ಲಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.