
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತ ದೇಹ ಪತ್ತೆಯಾಗಿದೆ.
4 ವರ್ಷ ಪ್ರಾಯದ ಹುಲಿಯ ದೇಹ ಕೊಳೆತಿರುವುದರಿಂದ ಲಿಂಗ ಗುರುತಿಸಲು ಸಾಧ್ಯವಾಗಿಲ್ಲ. ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಅರಣ್ಯ ಪ್ರದೇಶದ ಗಿಡಗಂಟಿಗಳ ಪೊದೆಯಲ್ಲಿ ಕಂಡುಬಂದಿದೆ. ಹುಲಿಯು ವನ್ಯಜೀವಿಯ ಜೊತೆಗಿನ ಕಾದಾಟದಿಂದ ಸುಮಾರು 12ರಿಂದ 15 ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖಾ ಪಶು ವೈದ್ಯಾಧಿಕಾರಿ ಡಾ.ವಾಸಿಂ ಮಿರ್ಜಾ ಮಾಹಿತಿ ನೀಡಿದರು.
‘ಹುಲಿಯ ಸಾವಿನ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸುವ ಸಲುವಾಗಿ ಮೃತ ಹುಲಿಯ ಅಂಗಾಂಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್.ಎಸ್ ತಿಳಿಸಿದರು.
ಸ್ಥಳಕ್ಕೆ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಎನ್.ಬೇಗೂರು ವಲಯ ವಲಯ ಅರಣ್ಯಾಧಿಕಾರಿ ಮಂಜುನಾಥ ಡಿ ಬಾಗೇವಾಡಿ, ಗುಂಡ್ರೆ ವಲಯದ ವಲಯ ಅರಣ್ಯಾಧಿಕಾರಿ ಅಮೃತೇಶ್ ಬಿ.ಬಿ, ಇಲಾಖಾ ಪಶು ವೈಧ್ಯಾಧಿಕಾರಿ ಡಾ.ವಾಸಿಂ ಮಿರ್ಜಾ ಹಾಗೂ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಾಮನುಸಾರ ಕಟ್ಟಿಗೆ ಮೂಲಕ ಸುಡಲಾಯಿತು. ಈ ವೇಳೆ ಎನ್.ಟಿ.ಸಿ.ಎ ಪ್ರತಿನಿಧಿ ಕೃತಿಕಾ ಅಲನಹಳ್ಳಿ, ಸರ್ಕಾರೇತರ ಸಂಸ್ಥೆ ಸದಸ್ಯರಾದ ರಘುರಾಂ.ಆರ್, ಗ್ರಾಪಂ ಸದಸ್ಯರಾದ ಕುಮಾರ್ ಸೇರಿ ಹೆಡಿಯಾಲ ಉಪ ವಿಭಾಗ ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.