ಗುಂಡ್ಲುಪೇಟೆ: ‘ತಾಲ್ಲೂಕಿನ ಹೊಂಗಳ್ಳಿ ಗ್ರಾಮದ ತೋಟದ ಮನೆಯ ಮಾಲೀಕರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದುಷ್ಕರ್ಮಿಗಳನ್ನು ಪಟ್ಟಣ ಠಾಣೆ ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಪ್ರಶಂಸಿಸಿದರು.
ಪಟ್ಟಣದಲ್ಲಿ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅ. 29ರ (ಗುರುವಾರ) ರಾತ್ರಿ 10.15 ರ ಸಮಯದಲ್ಲಿ ಹೊಂಗಳ್ಳಿ ಗ್ರಾಮದ ರೈತ ಪ್ರದೀಪ್ ಎಂಬುವರು ತಮ್ಮ ಜಮೀನಿನ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದರು. ರಾತ್ರಿ ವೇಳೆ ಸಿದ್ದು ಅಲಿಯಾಸ್ ಸಿದ್ದನಾಯಕ, ಕುಮಾರ, ರಂಗಸ್ವಾಮಿ ಅಲಿಯಾಸ್ ಪ್ರದೀಪ ಎಂಬುವವರು ಕೈಯಲ್ಲಿ ಮಚ್ಚು, ಕಬ್ಬಿಣದ ಪೈಪ್, ಚಾಕು ಮತ್ತು ಖಾರದ ಪುಡಿ ಹಿಡಿದುಕೊಂಡು ಮನೆಗೆ ನುಗ್ಗಿ ಮಾಲೀಕನನ್ನು ಹಣ ಕೊಡು ಎಂದು ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಹಣ ಕೊಡದಿದ್ದರೇ ಕೊಲೆ ಮಾಡುವುದಾಗಿ ಹೇಳಿ ಕಣ್ಣಿಗೆ ಖಾರದಪುಡಿ ಎರಚಿ ಕಬ್ಬಿಣದ ರಾಡ್ನಿಂದ ತಲೆಯ ಭಾಗಕ್ಕೆ ಹೊಡೆದು ಅವರ ಹೆಂಡತಿ ಕೊರಳಲ್ಲಿದ್ದ 32 ಗ್ರಾಂ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಮಚ್ಚಿನಿಂದ ತಲೆಗೆ ಹೊಡೆದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾಗಿ ತಿಳಿಸಿದರು.
‘ರೈತ ಪ್ರದೀಪ್ ನೀಡಿದ ದೂರಿನ ಅನ್ವಯ ಅರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಗಳನ್ನು ಬಂಧಿಸಲಾಗಿದ್ದು, ಅವರಿಂದ ₹ 1.5 ಲಕ್ಷ ಬೆಲೆ ಬಾಳುವ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಎರಡು ಕಬ್ಬಿಣದ ರಾಡ್, ಒಂದು ಮಚ್ಚು, ಒಂದು ಚಾಕು, ಕಬ್ಬಿಣದ ಚೇರ್, ಖಾರದಪುಡಿ ಪಟ್ಟಣವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.
‘ಸುಲಿಗೆ ಮಾಡಿದ ಅರೋಪಿಗಳನ್ನು ಕೇವಲ 24 ಗಂಟೆ ಒಳಗೆ ಪತ್ತೆ ಮಾಡಿ ರುವ ಸಂಬಂಧ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ. ಹದ್ದಣ್ಣನವರ್, ಡಿವೈಎಸ್ಪಿ ಅನ್ಸರ್ ಆಲಿ, ಸಿಪಿಐ ಮಹದೇವ ಸ್ವಾಮಿ, ಪಿಎಸ್ಐ ರಾಜೇಂದ್ರ, ಸುಜಾತಾ, ಹೆಡ್ಕಾನ್ಸ್ಟೆಬಲ್ ಶಿವನಂಜಪ್ಪ ಸೇರಿದಂತೆ ಹಲವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.