ADVERTISEMENT

ಮುದ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 9:38 IST
Last Updated 3 ಅಕ್ಟೋಬರ್ 2019, 9:38 IST
ಚಾಮರಾಜನಗರದ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು
ಚಾಮರಾಜನಗರದ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು   

ಚಾಮರಾಜನಗರ:ಜಿಲ್ಲಾ ದಸರಾದ ಎರಡನೇ ದಿನ ಸ್ಥಳೀಯ ಕಲಾವಿದರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ಮುದ ನೀಡಿದವು.

ಯಳಂದೂರಿನ ಗಾಯಕ ಸಹೋದರರಾದ ಆರ್.ರವಿಕುಮಾರ್ ಹಾಗೂ ಆರ್.ಮಹೇಂದರ್ ಅವರ ಸುಗಮ ಸಂಗೀತ ಮನಸೂರೆಗೊಂಡಿತು.

ಮಲಯ ಮಾರುತ ಚಿತ್ರದ 'ಶಾರದೇ ದಯೆತೋರಿದೆ...' ಹಾಡನ್ನು ರವಿಕುಮಾರ್ ಅವರು ಸುಶ್ರಾವ್ಯವಾಗಿ ಹಾಡಿ, ಕೇಳುಗರನ್ನು ಭಾವಪರವಶರಾದರು.

ADVERTISEMENT

ಕಾಣದ ಕಡಲಿಗೇ ಹಂಬಲಿಸಿದೆ ಮನ.... ಹಾಡನ್ನು ಮುಗಿಸುತ್ತಿದ್ದಂತೆ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತ್ತು.
ಇದಕ್ಕೂ ಮೊದಲು ಯಳಂದರೂರಿನ ಶಾಂತರಾಜು ಅವರ ತಂಡ ಜಾನಪದ ಗಾಯನ ನಡೆಸಿಕೊಟ್ಟಿತು.

ಗಮನಸೆಳೆದ ವಿದ್ಯಾರ್ಥಿಗಳು: ಜಿಲ್ಲೆಯ ವಿವಿಧ ಕಾಲೇಜುಗಳು ಪ್ರದರ್ಶಿಸಿದ ವಿವಿಧ ನೃತ್ಯಗಳು ನೆರೆದಿದ್ದವರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

ಜೆ ಎಸ್ ಎಸ್ ಮಹಿಳಾ ಪಿಯು ಕಾಲೇಜು, ಜೆಎಸ್ಎಸ್ ಮಹಿಳಾ ಪದವಿ ಕಾಲೇಜು, ಗುಂಡ್ಲುಪೇಟೆಯ ಗೌತಮ ಕಾಲೇಜು, ಅರಕಲವಾಡಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿತು.
ಗುಂಡ್ಲುಪೇಟೆಯ ಪೃಥ್ವಿ ಬುದ್ಧಿಮಾಂದ್ಯ ಶಾಲೆಯ ಮಕ್ಕಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು.

ಜಾನಪದ ಗಾಯನಕ್ಕೆ ತಲೆದೂಗಿದ ಜನ:ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡ ಹರಿಸಿದ ಗಾನಸುಧೆಗೆ ಪ್ರೇಕ್ಷಕ ಗಣ.

ಜನಸ್ತೋಮದ‌ ಮಧ್ಯದಿಂದ ಮೆರವಣಿಗೆ ಮೂಲಕ 'ಸಿದ್ದಯ್ಯ ಸ್ವಾಮಿ ಬನ್ನಿ ... ' ಹಾಡುತ್ತ ಆರು ಮಂದಿ ಗಾಯಕರು ವೇದಿಕೆ ಪ್ರವೇಶಿಸಿದ್ದು ಪ್ರೇಕ್ಷಕರ ‌ಮೆಚ್ಚುಗೆಗೆ ಪಾತ್ರವಾಯಿತು.

ತೂಗಿರೋ ತೂಗಿರೋ ಚಾಮರಾಜೇಶ್ವರನ... ಹಾಡು ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರ ಧ್ವನಿಯಲ್ಲಿ ಮೂಡಿಬಂತು.

ಮೈಸೂರಿನ ಬದರಿ ದಿವ್ಯಭೂಷಣ್ ಮತ್ತು ತಂಡ ಪ್ರದರ್ಶಿಸಿದ ಭಾರತೀಯ ವೈವಿಧ್ಯತೆ ಸಾದರಪಡಿಸುವ ನೃತ್ಯ ರೂಪಕದೊಂದಿಗೆ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.