ADVERTISEMENT

ಜೀವ ಭಯದಲ್ಲಿ ಸೇವೆ ಸಲ್ಲಿಸುವ ವೈದ್ಯರು

ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 4:18 IST
Last Updated 21 ಮೇ 2021, 4:18 IST
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾವಣಿಯ ಸಿಮೆಂಟ್ ಚಕ್ಕೆಗಳು ಉದುರುತ್ತಿವೆ (ಎಡಚಿತ್ರ). ಆಸ್ಪತ್ರೆ ಹಿಂಭಾಗದ ಶೌಚಾಲಯ ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿಲ್ಲ
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾವಣಿಯ ಸಿಮೆಂಟ್ ಚಕ್ಕೆಗಳು ಉದುರುತ್ತಿವೆ (ಎಡಚಿತ್ರ). ಆಸ್ಪತ್ರೆ ಹಿಂಭಾಗದ ಶೌಚಾಲಯ ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿಲ್ಲ   

ಯಳಂದೂರು: ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲವಾಗಿದ್ದು, ಗೋಡೆಗಳು ಸವೆದು ಉದುರು
ತ್ತಿವೆ. ಚಾವಣಿಯ ಸಿಮೆಂಟ್ ಚಕ್ಕೆಗಳು ಕಳಚಿ ಬೀಳುತ್ತಿರುವುದರ ನಡುವೆಯೇ ವೈದ್ಯ ಸಿಬ್ಬಂದಿ ಚಿಕಿತ್ಸೆ ನೀಡಬೇಕಿದೆ.

ಮಳೆ ಬಂದರೆ ರೋಗಿಗಳು ರಕ್ಷಣೆ ಪಡೆಯಲು ಪ್ರತ್ಯೇಕ ಸ್ಥಳ ಇಲ್ಲಿಲ್ಲ. ಅನುಪಯುಕ್ತ ಶೌಚಾಲಯ ನಿರ್ಮಾಣ ಹಂತದಲ್ಲಿ ಇದೆ. ಹಿಂಭಾಗ ಗಿಡಗಂಟಿ ಬೆಳೆದಿದೆ. ಚಿಕಿತ್ಸೆಗೆ ಬಂದವರು ಶೌಚಕ್ಕೂ ಬಯಲನ್ನು ಆಶ್ರಯಿಸುವ ಪರಿಸ್ಥಿತಿ ಇದೆ.

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರು ಮತ್ತು ಶುಶ್ರೂಷಕರು ಗುಣಮಟ್ಟದ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಸ್ಟಾಫ್‌ ನರ್ಸ್, ಆಶಾ ಮತ್ತು ಅಂಗನವಾಡಿ ಸಿಬ್ಬಂದಿ ಇದ್ದಾರೆ. ಹೀಗಾಗಿ ಹೆಚ್ಚಿನ ಜನರು ಹತ್ತಾರು ಕಿ.ಮೀ. ದೂರದಿಂದ ಬಂದು ಶುಶ್ರೂಷೆ ಪಡೆಯುತ್ತಾರೆ. ಈಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೋವಿಡ್ ಲಸಿಕೆ ಪಡೆಯಲು, ಕೋವಿಡ್‌ ಪರೀಕ್ಷೆಗೆ ಇಲ್ಲಿಗೇ ಬರಬೇಕು. ಹೆರಿಗೆ ಮತ್ತು ಸಣ್ಣಪುಟ್ಟ ಕಾಯಿಲೆಗೂ ಆಸ್ಪತ್ರೆಗೆ ಬರುವವರ ಸಂಖ್ಯೆ ಏರಿಕೆಯಾಗಿದ್ದು, ಕೊಠಡಿ ಮತ್ತು ಸ್ಥಳಾವಕಾಶ ಕೊರತೆಯಿಂದ ವೈದ್ಯರಿಗೆ ಸೇವೆ ಸಲ್ಲಿಸಲು ಹೆಚ್ಚಿನ ಒತ್ತಡ ಇದೆ’ ಎಂದು ಗ್ರಾಮದ ಮಹದೇವಸ್ವಾಮಿ ಹೇಳಿದರು.

ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆಗಾಲದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ. ಇಲ್ಲಿ ರೋಗಿಗಳು ವಿಶ್ರಮಿಸಲು, ದಾಖಲಾಗಲು ಅವಕಾಶ ಇಲ್ಲ. ಪಂಚಾಯಿತಿಗೆ ಹೊಂದಿಕೊಂಡ ಉಪ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಲಭ್ಯ ಹೆಚ್ಚಿಸಬೇಕು. ಆ ಮೂಲಕ ಒಂದೇ ಕಡೆ ಬರುವ ರೋಗಿಗಳ ಒತ್ತಡವನ್ನು ತಗ್ಗಿಸ ಬೇಕು ಎನ್ನುತ್ತಾರೆ ಹೊಸೂರು ಮಹದೇವಮ್ಮ.

ಉಪ ಆರೋಗ್ಯ ಕೇಂದ್ರಗಳನ್ನು ಚಾಲನೆಗೊಳಿಸಿ, ಕೋವಿಡ್ ಪರೀಕ್ಷೆಗೆ ದೂರದ ಊರುಗಳಿಗೆ ಓಡಾಡುವುದು ತಪ್ಪಬೇಕು ಎನ್ನುತ್ತಾರೆ ದೇವರಹಳ್ಳಿ ಪುಟ್ಟಪ್ಪ.

ಆರೋಗ್ಯ ಕೇಂದ್ರದ ಚಾವಣಿಯನ್ನು ಹಿಂದೆ ತಾಲ್ಲೂಕು ಪಂಚಾಯಿತಿ ವತಿಯಿಂದ ದುರಸ್ತಿ ಮಾಡಲಾಗಿತ್ತು. ಈಗ ಮತ್ತೆ ಶಿಥಿಲವಾಗಿದೆ. ಇಲ್ಲಿನ 2 ಕೊಠಡಿಗಳಲ್ಲಿ 8 ಸಿಬ್ಬಂದಿ, 13 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಡಾ.ತನುಜಾ ತಿಳಿಸಿದರು.

ಕೋವಿಡ್ ಪರೀಕ್ಷೆಗೆ ಒತ್ತು: ತಾಲ್ಲೂಕಿನಲ್ಲಿ 64 ಆಶಾ, 15 ಎಎನ್ಎಂ ಮತ್ತು 100 ನರ್ಸ್‌ಗಳು ಇದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ನುರಿತ ಶುಶ್ರೂಷಕರ ಅಗತ್ಯ ಇದೆ. 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಗೌಡಹಳ್ಳಿ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳ 3250 ಕುಟುಂಬಗಳ ಒಟ್ಟು 15 ಸಾವಿರ ಜನರಿಗೆ 1 ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಯರಿಯೂರು-2 ಮತ್ತು ಶಿವಕಳ್ಳಿಗಳಲ್ಲಿ ಉಪ ಕೇದ್ರಗಳಿವೆ. ಉಳಿದೆಡೆ ಬಳಕೆಯಲ್ಲಿ ಇಲ್ಲ.

ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇಲ್ಲಿನ ಕಟ್ಟಡ ಶಿಥಿಲವಾಗಿದ್ದು, ಉತ್ತಮ ಕಟ್ಟಡ ನಿರ್ಮಿಸಲು ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸೋಂಕು ಕಂಡುಬಂದರೆ ಇಲಾಖೆಯ ವಾಹನ ಗಳಲ್ಲಿ ಕರೆತಂದು ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.