ADVERTISEMENT

ಚಾಮರಾಜನಗರ | ಬರ ಪರಿಹಾರ: 47,552 ರೈತರಿಗೆ ₹8.90 ಕೋಟಿ ಪಾವತಿ

ಏಳು ಬ್ಯಾಚ್‌ಗಳಲ್ಲಿ ರೈತರ ಖಾತೆಗೆ ತಲಾ ₹2000 ಜಮೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 6:19 IST
Last Updated 14 ಫೆಬ್ರುವರಿ 2024, 6:19 IST
ಚಾಮರಾಜನಗರ ತಾಲ್ಲೂಕಿನ ಶೀಗೇವಾಡಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಹತ್ತಿ ಬೆಳೆ ಒಣಗಿ ಹೋಗಿತ್ತು
ಚಾಮರಾಜನಗರ ತಾಲ್ಲೂಕಿನ ಶೀಗೇವಾಡಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಹತ್ತಿ ಬೆಳೆ ಒಣಗಿ ಹೋಗಿತ್ತು   

ಚಾಮರಾಜನಗರ: ಕಳೆದ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆನಷ್ಟ ಅನುಭವಿಸಿದ ಜಿಲ್ಲೆಯ ರೈತರ ಖಾತೆಗೆ ತಲಾ ₹2000 ಹಣವನ್ನು ರಾಜ್ಯ ಸರ್ಕಾರ ಜಮೆ ಮಾಡಿದೆ. 

ಜಿಲ್ಲೆಯ 47,552 ಫಲಾನುಭವಿಗಳ ಖಾತೆಗೆ ₹8.90 ಕೋಟಿ ಹಣ ಜಮೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. 

ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಕಾಡಿದ್ದರಿಂದ ಜಿಲ್ಲೆಯ ಸಾವಿರಾರು ರೈತರು ಬೆಳೆ ನಷ್ಟ ಅನುಭವಿಸಿದ್ದರು. ಸರ್ಕಾರ ಕೂಡ ಜಿಲ್ಲೆಯ ಐದೂ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. 

ADVERTISEMENT

ಮೊದಲ ಹಂತದಲ್ಲಿ ನಷ್ಟ ಅನುಭವಿಸಿದ ರೈತರಿಗೆ ₹2,000 ಪಾವತಿ ಮಾಡುವುದಾಗಿ ಸರ್ಕಾರ ಹೇಳಿತ್ತು. ಇದಕ್ಕಾಗಿ ₹105 ಕೋಟಿ ಬಿಡುಗಡೆ ಮಾಡಿತ್ತು. 

ಫ್ರೂಟ್ಸ್‌ ತಂತ್ರಾಂಶದಿಂದ ಪಡೆದ ಬೆಳೆ ನಷ್ಟ ಮಾಹಿತಿ ಆಧಾರದಲ್ಲಿ ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶದ ಮೂಲಕ ಬರ ಪರಿಹಾರ ನೀಡಲಾಗಿದೆ. 

ಜಿಲ್ಲೆಯಲ್ಲಿ ಏಳು ಬ್ಯಾಚ್‌ಗಳಲ್ಲಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಆರು ಬ್ಯಾಚ್‌ನವರಿಗೆ ಹಣ ಪಾವತಿಯಾಗಿದ್ದು, ಏಳನೇ ಬ್ಯಾಚ್‌ನ ರೈತರ ಖಾತೆಗಳಿಗೆ ಒಂದೆರಡು ದಿನಗಳಲ್ಲಿ ಹಣ ಜಮೆಯಾಗಲಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಐದು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮಳೆಯಾಶ್ರಿತ 39,263 ಹೆಕ್ಟೇರ್‌ಗಳಲ್ಲಿ ಮತ್ತು ನೀರಾವರಿ ಆಶ್ರಿತ 3,542 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 

ಗುಂಡ್ಲುಪೇಟೆಯಲ್ಲಿ ಹೆಚ್ಚು: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ, 20,089 ಹೆಕ್ಟೇರ್‌ ಬೆಳೆ ನಷ್ಟವಾಗಿದ್ದು, 20,581 ಫಲಾನುಭವಿಗಳಿಗೆ ₹2000ದಂತೆ ₹3.89 ಕೋಟಿ ಪಾವತಿಯಾಗಿದೆ. 

ಚಾಮರಾಜನಗರ ತಾಲ್ಲೂಕಿನಲ್ಲಿ 13,103 ಹೆಕ್ಟೇರ್‌ನಲ್ಲಿ ಬೆಳೆನಷ್ಟವಾಗಿದ್ದು, 14,441 ಮಂದಿಗೆ ₹2.57 ಕೋಟಿ ಪರಿಹಾರ ದೊರೆತಿದೆ.

ಹನೂರು ತಾಲ್ಲೂಕಿನಲ್ಲಿ 5,188 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶವಲ್ಲದೆ, 3,542 ಹೆಕ್ಟೇರ್‌ ನೀರಾವರಿ ಜಮೀನಿನಲ್ಲೂ ಬೆಳೆದಿದ್ದ ಬೆಳೆ ಹಾಳಾಗಿತ್ತು. ತಾಲ್ಲೂಕಿನ 11,105 ಫಲಾನುಭವಿಗಳಿಗೆ ₹2.18 ಕೋಟಿ ಜಮೆಯಾಗಿದೆ.  

ಬರಪರಿಹಾರ ಪಡೆದವರ ಮಾಹಿತಿ, ನಾಡಕಚೇರಿಗಳು ಹಾಗೂ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಿ.ಟಿ.ಶಿಲ್ಪಾನಾಗ್‌

ಪರಿಹಾರ ತಂತ್ರಾಂಶದ ಮೂಲಕ ಜಮೆ ಏಳು ಬ್ಯಾಚ್‌ಗಳಲ್ಲಿ ಹಣ ಪಾವತಿ ಗುಂಡ್ಲುಪೇಟೆಯಲ್ಲಿ ಹೆಚ್ಚು ಮಂದಿ

ರಾಜ್ಯ ಮಟ್ಟದಿಂದಲೇ ನೇರವಾಗಿ ಹಣ ಪಾವತಿಯಾಗಿದ್ದು 47,552 ಮಂದಿಗೆ ₹8.90 ಕೋಟಿ ಜಮೆಯಾಗಿದೆ. ಜಿಲ್ಲಾ ಹಂತದಲ್ಲಿ ಯಾವುದೂ ಬಾಕಿ ಇಲ್ಲ- ಸಿ.ಟಿ.ಶಿಲ್ಪಾನಾಗ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.