ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಕಾನೆ ರೋಹಿತ್ ಪುಂಡಾಟ ನಡೆಸಿದ್ದು ವಾಹನ ಸವಾರರು ಇದರ ಆರ್ಭಟದಿಂದ ಮಂಗಳವಾರ ತೊಂದರೆ ಅನುಭವಿಸಿದರು.
ರಾಂಪುರ ಆನೆ ಶಿಬಿರದಿಂದ ಬಂಡೀಪುರಕ್ಕೆ ವಿಶೇಷ ತರಬೇತಿಗಾಗಿ ಐದು ಆನೆಗಳನ್ನು ಕರೆತರಲಾಗಿತ್ತು. ಬದಲಾದ ಪರಿಸರಕ್ಕೆ ಹೊಂದಿಕೊಳ್ಳದ ರೋಹಿತ್ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ಮಾವುತ ವೆಂಕಟೇಶ್ ಮೇಲೆಯೂ ದಾಳಿ ನಡೆಸಿ ಗಾಯಗೊಳಿಸಿದೆ.
ಗಾಯಾಳು ವೆಂಕಟೇಶ್ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಇದು ರಸ್ತೆಯಲ್ಲಿ ಚಲಿಸುವ ವಾಹನಗಳ ಮೇಲೆ ಏಕಾಏಕಿ ದಾಳಿ ನಡೆಸಲು ಮುಂದಾಗುತ್ತಿತ್ತು. ಕೆಲ ದ್ವಿಚಕ್ರ ವಾಹನ ಸವಾರರು ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪ್ರಸಂಗಗಳು ಆ ಮಾರ್ಗದಲ್ಲಿ ನಡೆದಿವೆ. ಇದರಿಂದಾಗಿ ಗಂಟೆಗಟ್ಟಲೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ದಿಕ್ಕಾಪಾಲಾಗಿ ನುಗ್ಗಿ ಸವಾರರನ್ನ ಭಯಭೀತಗೊಳಿಸಿದ ಆನೆ ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂದವು.
‘ಆನೆ ಪುಂಡಾಟದ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಪರಿಸರ ಬದಲಾದಂತೆ ಆನೆಗಳ ವರ್ತನೆ ಬದಲಾಗುತ್ತದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರ ಮಾಡಿದಾಗ ಈ ರೀತಿಯಾಗಿ ವರ್ತಿಸುತ್ತವೆ. ಆನೆಯನ್ನು ನಿಯಂತ್ರಿಸುವಲ್ಲಿ ಇಲಾಖೆ ಸಿಬ್ಬಂದಿ ಕೆಲಸ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಆನೆಗಳಿಗೆ ತರಬೇತಿ ಸಮಯದಲ್ಲಿ ರೋಹಿತ ಎಂಬ ಆನೆ ಮಾವುತನನ್ನು ತಳ್ಳಿದೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಯಾವುದೇ ತೊಂದರೆ ಇಲ್ಲ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.