ಚಾಮರಾಜನಗರ: ನಟ ಪುನೀತ್ ರಾಜ್ ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿಯ ಅಂಗವಾಗಿ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು ಶನಿವಾರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ವಿವಿಧ ಸಂಘ ಸಂಸ್ಥೆಗಳು ಕೂಡ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ಚಾಮರಾಜನಗರದ ಈಶ್ವರಿ ಟ್ರಸ್ಟ್ ನಗರದ ಸಂಪಿಗೆ ರಸ್ತೆಯಲ್ಲಿ ಸಾಲು ಗಿಡಗಳನ್ನು ನೆಡುವ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.
ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮುರುಗೇಂದ್ರಪ್ಪ ಹಾಗೂ ಟ್ರಸ್ಟ್ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಅವರು ಸಾಲು ಗಿಡಗಳನ್ನು ನೆಟ್ಟರು. ಆ ಬಳಿಕ ಸಾರ್ವಜನಿಕರಿಗೆ ಉಪಾಹಾರ ವಿತರಿಸಲಾಯಿತು.
ಅನ್ನ ಸಂತರ್ಪಣೆ: ನಗರದ ರಾಮಸಮುದ್ರ ಸೇರಿದಂತೆ ಹಲವು ಕಡೆಗಳಲ್ಲಿ ಪುನೀತ್ ಅಭಿಮಾನಿಗಳು, ಅವರ ಭಾವಚಿತ್ರ ಇಟ್ಟು ಗೌರವ ನಮನ ಸಲ್ಲಿಸಿದರು. ಸಾರ್ವಜನಿಕರಿಗೆ ಅಂತ ಸಂತರ್ಪಣೆ ಮಾಡಿದರು.
ರಾಮಸಮುದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, 'ಪುನೀತ್ ಅವರು ಇದ್ದಾಗ ಅವರೊಬ್ಬರ ಖ್ಯಾತ ನಟ ಎಂದಷ್ಟೇ ತಿಳಿದಿತ್ತು. ಅವರು ನಿಧನಹೊಂದಿದ ನಂತರ ಅವರ ಸಾಮಾಜಿಕ ಕಾರ್ಯಗಳು ಬೆಳಕಿಗೆ ಬಂದವು. ನನ್ನೂರು ಸೇರಿದಂತೆ ಇಡೀ ರಾಜ್ಯದಾದ್ಯಂತ ಅವರನ್ನು ಸ್ಮರಿಸಲಾಗುತ್ತಿದೆ. ಭೂಮಿಯಲ್ಲಿ ಹುಟ್ಟಿದ ನಂತರ ಜನರಿಗೆ ಏನಾದರೂ ಸೇವೆ ಮಾಡಿದರೆ, ನಾವು ಸತ್ತಮೇಲೆ ನಮ್ಮನ್ನು ಜನ ಸ್ಮರಿಸುತ್ತಾರೆ ಎಂಬುದಕ್ಕೆ ಪುನೀತ್ ರಾಜ್ ಕುಮಾರ್ ಅವರು ಸಾಕ್ಷಿ' ಎಂದು ಬಣ್ಣಿಸಿದರು.
ನಂತರ, ಶಾಸಕ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರು ಕೆ.ಎಸ್.ಸುಂದರ್ ರಾಜ್ ಅವರು ಸಾಂಕೇತಿಕವಾಗಿ ಜನರಿಗೆ ಊಟ ಬಡಿಸುವುದರ ಮೂಲಕ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಗ್ರಾಮೀಣ ಭಾಗಗಳಲ್ಲೂ ಯುವಕರು ವಿವಿಧ ಸಂಘಟನೆಗಳ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.