ADVERTISEMENT

ಚಾಮರಾಜನರಗರ: ಕೈಕೊಟ್ಟ ಈರುಳ್ಳಿ: ಬೆಳೆ ನಾಶ ಮಾಡಿದ ರೈತ

ತೆರಕಣಾಂಬಿ ಎಪಿಎಂಸಿಯಿಂದ ತಂದಿದ್ದ ಬಿತ್ತನೆ ಬೀಜ; ಹುಲುಸಾಗಿ ಬೆಳೆದ ಗಿಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 7:08 IST
Last Updated 4 ಫೆಬ್ರುವರಿ 2023, 7:08 IST
ಸಣ್ಣ ಈರುಳ್ಳಿ ಬೆಳೆದಿದ್ದ ಹೊಲವನ್ನು ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಿದ ರೈತ
ಸಣ್ಣ ಈರುಳ್ಳಿ ಬೆಳೆದಿದ್ದ ಹೊಲವನ್ನು ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಿದ ರೈತ   

ಚಾಮರಾಜನರಗರ: ಸಣ್ಣ ಈರುಳ್ಳಿ ಗಿಡಗಳು ಹುಲುಸಾಗಿ ಬೆಳೆದಿದ್ದರೂ, ಈರುಳ್ಳಿ ಕಟ್ಟದಿರುವುದರಿಂದ ನಷ್ಟ ಅನುಭವಿಸಿರುವ ರೈತರೊಬ್ಬರು ಟ್ರ್ಯಾಕ್ಟರ್‌ ಮೂಲಕ ಹೊಲ ಉತ್ತು ಬೆಳೆ ನಾಶ ಮಾಡಿದ್ದಾರೆ.

ತಾಲ್ಲೂಕಿನ ಕೆ.ಕೆ.ಹುಂಡಿಯ ರೈತರಾದ ನಾಗರಾಜು ‌ಮೂರು ಎಕರೆಯಲ್ಲಿ ಬೆಳೆದಿದ್ದ ಸಣ್ಣ ಈರುಳ್ಳಿ ಬೆಳೆಯನ್ನು ನಾಶ ಮಾಡಿದ್ದಾರೆ. ₹ 4 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.

ಮೂರು ತಿಂಗಳ ಹಿಂದೆ ಗುಂಡ್ಲು ಪೇಟೆ ತಾಲ್ಲೂಕಿನ ತೆರಕಣಾಂಬಿ ಎಪಿ ಎಂಸಿಯಿಂದ ಕ್ವಿಂಟಲ್‌ಗೆ ₹ 7 ಸಾವಿರ ನೀಡಿ ಸಣ್ಣ ಈರುಳ್ಳಿ ಬಿತ್ತನೆ ಬೀಜ ಖರೀದಿಸಿದ್ದರು. ಎಂಟು ಕ್ವಿಂಟಲ್‌ ಬಿತ್ತನೆ ಮಾಡಿದ್ದರು. ಸಾಮಾನ್ಯವಾಗಿ ಮೂರು ತಿಂಗಳಲ್ಲಿ ಸಣ್ಣ ಈರುಳ್ಳಿ ಕಟಾವಿಗೆ ಬರುತ್ತದೆ. 90 ದಿನ ಕಳೆದರೂ ಬಂದಿಲ್ಲ. ಗಿಡಗಳು ಹುಲುಸಾಗಿ ಬೆಳೆದಿದ್ದರೂ, ನೆಲದಡಿಯಲ್ಲಿ ಈರುಳ್ಳಿ ಕಟ್ಟಿಲ್ಲ. ಇದರಿಂದ ಬೇಸತ್ತ ನಾಗರಾಜು ಈರುಳ್ಳಿ ಹೊಲವನ್ನು ಉತ್ತಿದ್ದಾರೆ.

ADVERTISEMENT

3 ದಿನದ ಹಿಂದೆ ತೋಟಗಾ ರಿಕೆ ಇಲಾಖೆ ಅಧಿಕಾರಿಗಳು ಜಮೀ ನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ. ಬಿತ್ತನೆ ಬೀಜದ ಕಾರಣಕ್ಕೆ ಈ ರೀತಿ ಆಗಿರಬಹುದು ಎನ್ನಲಾಗಿದೆ.

ನಾಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿ, ‘ಬಿತ್ತನೆ ಮಾಡಿದ ನಂತರ ಗಿಡಗಳು ಚೆನ್ನಾಗಿ ಬಂದಿದ್ದರಿಂದ ಮತ್ತೆ ಕೀಟನಾಶಕ, ರಸಗೊಬ್ಬರ ಎಲ್ಲ ಹಾಕಿದ್ದೆ. ಎಕರೆಗೆ ₹ 90 ಸಾವಿರ ಖರ್ಚು ಮಾಡಿದ್ದೇನೆ. ಮೂರು ತಿಂಗಳು ಕಳೆದರೂ ಈರುಳ್ಳಿ ಕಟ್ಟಿಲ್ಲ. ಸ್ವಲ್ಪವೂ ಫಸಲು ಬಂದಿಲ್ಲ. ಪೂರ್ಣ ನಷ್ಟ ಅನುಭವಿಸಿದ್ದೇನೆ. ಸರ್ಕಾರ ನಷ್ಟ ಪರಿಹಾರ ಕೊಡಬೇಕು’ ಎಂದರು.

ಅದೇ ಗ್ರಾಮದ ಇನ್ನಿಬ್ಬರು ರೈತರೂ ಇದೇ ರೀತಿ ನಷ್ಟ ಅನುಭವಿಸಿದ್ದಾರೆ.

ರಸೀದಿ ಇಲ್ಲ: ತೆರಕಣಾಂಬಿ ಎ‍‍ಪಿಪಿಎಂಸಿ ಯಿಂದ ನಾಗರಾಜು ಬಿತ್ತನೆ ಬೀಜ ಖರೀದಿಸಿದ್ದಾರೆ. ತಮಿಳುನಾಡಿನಿಂದ ಅಲ್ಲಿಗೆ ಬಿತ್ತನೆ ಬೀಜ ಪೂರೈಕೆಯಾಗಿ ಏಜೆನ್ಸಿ ಮೂಲಕ ಇವರು ಖರೀದಿಸಿ ದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದ ರಸೀದಿ ಅವರ ಬಳಿ ಇಲ್ಲ.

ಪ್ರತಿಕ್ರಿಯೆ ಪಡೆಯಲು ತೋಟ ಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್‌ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.