ADVERTISEMENT

ಕಬ್ಬಿನ ಗದ್ದೆಗೆ ಹಾಕಿದ ಬೆಂಕಿಗೆ ಸಿಲುಕಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:07 IST
Last Updated 22 ಏಪ್ರಿಲ್ 2021, 13:07 IST
ಘಟನೆ ನಡೆದ ಸ್ಥಳದಲ್ಲಿ ರೈತನ ಕುಟುಂಬದವರು ಹಾಗೂ ಊರಿನವರು ಸೇರಿರುವುದು
ಘಟನೆ ನಡೆದ ಸ್ಥಳದಲ್ಲಿ ರೈತನ ಕುಟುಂಬದವರು ಹಾಗೂ ಊರಿನವರು ಸೇರಿರುವುದು   

ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿದ್ದ ತರಗಿಗೆ ತಾವೇ ಹಾಕಿದ ಬೆಂಕಿಯಿಂದಾಗಿ ರೈತರೊಬ್ಬರು ತಾಲ್ಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ಗುರುವಾರ ಮೃತಪಟ್ಟಿದ್ದಾರೆ.

ಗ್ರಾಮದ ನಿವಾಸಿ ವೆಂಕಟರಂಗೇಗೌಡ (75) ಮೃತಪಟ್ಟವರು. ತಮಗೆ ಸೇರಿದ ಸರ್ವೆ ನಂ 60/2 ರ 27 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಗುತ್ತಿಗೆ ಆಧಾರದಲ್ಲಿ ಮಾರಾಟ ಮಾಡಿದ್ದರು. ಗುತ್ತಿಗೆ ಪಡೆದಿದ್ದವರು ಕಟಾವು ಮಾಡಿದ್ದರು. ವೆಂಕಟರಂಗೇಗೌಡ ಅವರು ಗುರುವಾರ ಮಧ್ಯಾಹ್ನ ಜಮೀನಿನಲ್ಲಿದ್ದ ಕಬ್ಬಿನ ತರಗಿಗೆ ಬೆಂಕಿ ಹಾಕಿದ್ದಾರೆ.

ಬೆಂಕಿಯು ಪಕ್ಕದ ಜಮೀನಿನಲ್ಲಿ ಬೆಳದಿದ್ದ ಸಸಿ ಕಬ್ಬಿಗೆ ತಗುಲಿತು ಎನ್ನಲಾಗಿದೆ. ಇದನ್ನು ನಂದಿಸುವ ಪ್ರಯತ್ನದಲ್ಲಿ ವೆಂಕಟರಂಗೇಗೌಡ ಅವರು ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಬೆಂಕಿಯ ಶಾಖ ಹಾಗೂ ಹೊಗೆಯಿಂದಾಗಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ.

ADVERTISEMENT

‘ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ರೈತನ ಮನೆಯವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬಂದಿಲ್ಲ’ ಎಂದು ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಆನಂದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.