ADVERTISEMENT

‘ನಮ್ಮೂರ ಭೂಮಿ, ನಮಗಿರಲಿ; ಅನ್ಯರಿಗೆ ಅಲ್ಲ’ ಚಳವಳಿ ಸೋಮವಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 15:00 IST
Last Updated 2 ಆಗಸ್ಟ್ 2020, 15:00 IST
ಆಂದೋಲನದ ಲಾಂಛನ
ಆಂದೋಲನದ ಲಾಂಛನ   

ಚಾಮರಾಜನಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ, ರೈತ ಪರ ಸಂಘಟನೆಗಳು, ಪ್ರಗತಿಪರ ಸಂಘನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಹಮ್ಮಿಕೊಂಡಿರುವ ‘ನಮ್ಮೂರ ಭೂಮಿ ನಮಗಿರಲಿ;ಅನ್ಯರಿಗಲ್ಲ– ಉಳುವವರಿಗೇ ಭೂಮಿ, ಉಳ್ಳವರಿಗಲ್ಲ’ ಆಂದೋಲನ ಜಿಲ್ಲೆಯಲ್ಲಿ ಸೋಮವಾರ (ಆಗಸ್ಟ್‌ 3) ನಡೆಯಲಿದೆ.

ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ಸಂಘ ‌ಹಾಗೂ ಹಸಿರು ಸೇನೆ, ಮೈಸೂರು– ಚಾಮರಾಜನಗರ ಜಿಲ್ಲಾ ಸುಸ್ಥಿತ ಸಾವಯವ ಕೃಷಿಕರ ಒಕ್ಕೂಟಗಳು ಒಟ್ಟಾಗಿ ಈ ಆಂದೋಲನ ಹಮ್ಮಿಕೊಂಡಿವೆ.

ಆಂದೋಲದ ಅಡಿಯಲ್ಲಿ ಗ್ರಾಮಗಳಲ್ಲಿ ಫಲಕ ಮತ್ತು ಪತ್ರ ಚಳವಳಿ ನಡೆಯಲಿದೆ. ಇದರ ಜೊತೆಗೆ ಮಾಹಿತಿ ಪತ್ರ, ಕರಪತ್ರ, ವಿಡಿಯೊ ತುಣುಕುಗಳು, ಪೋಸ್ಟರ್‌ಗಳು, ಗೋಡೆ ಬರಹ, ಹಾಡುಗಳ ಮೂಲಕ ತಿದ್ದುಪಡಿ ಕಾಯ್ದೆಯ ಅಪಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಆಂದೋಲನದ ಸಂಯೋಜಕರಲ್ಲಿ ಒಬ್ಬರಾಗಿರುವ ವಿ.ಗಾಯತ್ರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬೆಳಿಗ್ಗೆ 8.30ಕ್ಕೆ ಸಂತೇಮರಹಳ್ಳಿಯಲ್ಲಿ, 9.30ಕ್ಕೆ ಚಾಮರಾಜನಗರ, 11 ಗಂಟೆಗೆ ಚಂದಕವಾಡಿ, ಮಧ್ಯಾಹ್ನ 12ಗಂಟೆಗೆ ಯಳಂದೂರು, ಮಧ್ಯಾಹ್ನ 1 ಗಂಟೆಗೆ ಕೊಳ್ಳೇಗಾಲ, 2 ಗಂಟೆಗೆ ಹನೂರು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬೆಳಿಗ್ಗೆ 8 ಗಂಟೆಗೆ ಗುಂಡ್ಲುಪೇಟೆ, 9 ಗಂಟೆಗೆ ತೆರಕಣಾಂಬಿಯಲ್ಲಿ ಆಂದೋಲನ ನಡೆಯಲಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ರೈತ ಮುಖಂಡರು, ಸಾರ್ವಜನಿಕರು ಭಾಗವಹಿಸಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.