ಚಾಮರಾಜನಗರ: ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹೆಚ್ಚು ಮಳೆ ಆಶ್ರಿತ ಭೂಮಿ ಹೊಂದಿರುವ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ತೀರಾ ಕೆಳಮಟ್ಟಕ್ಕೆ ಕುಸಿದಿದೆ. 1,300 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಬತ್ತಿರುವುದರಿಂದ ರೈತಾಪಿ ವರ್ಗ ನೆರೆಯ ರಾಜ್ಯಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೃಷಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಎ.ಎಂ.ಮಹೇಶ್ಪ್ರಭು ಒತ್ತಾಯಿಸಿದರು.
ಹನೂರು ತಾಲ್ಲೂಕಿನ ರಾಮಾಪುರ, ಎಲ್ಲೆಮಾಳ, ದೊಡ್ಡಾಲತ್ತೂರು, ಮಾರ್ಟಳ್ಳಿ, ಹೂಗ್ಯಂ, ಶೆಟ್ಟಿಹಳ್ಳಿ, ಸೂಳೇರಿಪಾಳ್ಯ, ಕುರಟ್ಟಿ ಹೊಸೂರು, ಅಜ್ಜಿಪುರ ಗ್ರಾಮಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಸರ್ಕಾರ ತುರ್ತು ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಉಡೊತೊರೆ ಹಾಗೂ ಕೀರೆಪಾತಿ ಜಲಾಶಯಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತಂಬಿಸಬೇಕು. ಕೊಳ್ಳೇಗಾಲ ತಾಲ್ಲೂಕಿನ ಕೋಟೆಕೆರೆಗೆ ಕಾವೇರಿ ನದಿಯ ಮೂಲಕ ನೀರು ತುಂಬಿಸಬೇಕು, ಗುಂಡ್ಲುಪೇಟೆ ತಾಲ್ಲೂಕಿನ 110 ಕೆರೆಗಳಿಗೆ ನೀರು ತುಂಬಿಸಬೇಕು, ಗೋಪಿನಾಥಂ, ಆಲಂಬಾಡಿ, ಮಾರಿಕೋಟೆ, ಜಂಜುಪಟ್ಟಿ, ಅಪ್ಪಕಂಪಟ್ಟಿ, ಪೋಂಗಂ, ಅತ್ತೂರು, ಪದುಕಾಡು, ತೆಂಗಯ್ಯಕೊಂಬು ಗ್ರಾಮಗಳಲ್ಲಿರುವ ರೈತರಿಗೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.
ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು, ಕೈಗಾರಿಕೆಗಳ ಕಲುಷಿತ ನೀರು ಕೆರೆ ಕಟ್ಟೆಗಳಿಗೆ ಸೇರದಂತೆ ಕ್ರಮ ಕೈಗೊಳ್ಳಬೇಕು, ಬ್ಯಾಂಕ್ಗಳಲ್ಲಿ ರೈತರಿಗೆ ಸಾಲ ಸಹಿತ ಇತರೆ ಸೌಲಭ್ಯಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕೊಳ್ಳೇಗಾಲದ ಸತ್ತೇಗಾಲದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು, ಬೆಳೆನಷ್ಟಕ್ಕೆ ಬೆಳೆ ಪರಿಹಾರ ನೀಡಬೇಕು, ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿರುವ ಟೋಲ್ನಲ್ಲಿ ಸ್ಥಳೀಯರಿಗೆ ತೆರಿಗೆ ವಿನಾಯಿತಿ ನೀಡಬೇಕು, ಬಂಡೀಪುರ ಅರಣ್ಯ ವಲಯದ ಹೆದ್ದಾರಿಯಲ್ಲಿ ವಾಹನಗಳಿಂದ ಹಣ ವಸೂಲಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ವಿಭಾಗೀಯ ಕಾರ್ಯದರ್ಶಿ ಸಿದ್ದರಾಜು, ಚಿನ್ನಸ್ವಾಮಿ ಗೌಂಡರ್, ಶಿವಕುಮಾರ್ ಮಹದೇವಪ್ಪ ಸೇರಿದಂತೆ ಹಲವರು ಇದ್ದರು.
ಅನಗತ್ಯ ಸಫಾರಿಗಳಿಗೆ ಕಡಿವಾಣ ಹಾಕಿ
ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಯಬೇಕು ಪ್ರಾಣಿಗಳಿಂದ ಬೆಳೆ ನಷ್ಟಕ್ಕೆ ಪರಿಹಾರ ವಿತರಿಸಬೇಕು ಪ್ರಾಣಹಾನಿಯಾದವರ ಕುಟುಂಬಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ವನ್ಯಜೀವಿಗಳಿಂದ ಮೃತಪಡುವ ಜಾನುವಾರುಗೆ ಸೂಕ್ತ ಪರಿಹಾರ ವಿತರಿಸಬೇಕು ಅರಣ್ಯದೊಳಗಿರುವ ಅನಧಿಕೃತ ಹೋಂಸ್ಟೇ ರೆಸಾರ್ಟ್ ತೆರವುಗೊಳಿಸಿ ಅನಗತ್ಯ ಸಫಾರಿಗಳಿಗೆ ಕಡಿವಾಣ ಹಾಕಬೇಕು ಎಂದು ಎ.ಎಂ.ಮಹೇಶ್ಪ್ರಭು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.