ADVERTISEMENT

‘ಚೆಂಡು ಹೂವು ಸಂಸ್ಕರಣೆ ಕಾರ್ಖಾನೆ ಬಂದ್ ಮಾಡಿ’

ಗುಂಡ್ಲುಪೇಟೆಯಿಂದ ಚಾಮರಾಜನಗರದವರೆಗೆ ರೈತ ಮುಖಂಡರ ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:49 IST
Last Updated 12 ಡಿಸೆಂಬರ್ 2025, 2:49 IST
ಗುಂಡ್ಲುಪೇಟೆ ತಾಲೂಕಿನಲ್ಲಿ ನಿರ್ಮಾಣವಾಗಿರುವ ಚೆಂಡು ಹೂ ಸಂಸ್ಕರಣಾ ಕಾರ್ಖಾನೆ ಬಂದ್ ಮಾಡಿಸುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾಡಳಿತ ಭವನದ ಎದುರು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆ ತಾಲೂಕಿನಲ್ಲಿ ನಿರ್ಮಾಣವಾಗಿರುವ ಚೆಂಡು ಹೂ ಸಂಸ್ಕರಣಾ ಕಾರ್ಖಾನೆ ಬಂದ್ ಮಾಡಿಸುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾಡಳಿತ ಭವನದ ಎದುರು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ‘ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಚೆಂಡು ಹೂವು ಸಂಸ್ಕರಣಾ ಕಾರ್ಖಾನೆಯಿಂದ ಹೊರ ಬರುತ್ತಿರುವ ತ್ಯಾಜ್ಯ ಹಾಗೂ ದುರ್ವಾಸನೆಯಿಂದ ಸುತ್ತತಲಿನ ರೈತರು ಹಾಗೂ ಗ್ರಾಮಸ್ಥರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಕಾರ್ಖಾನೆ ಮುಚ್ಚಿಸಬೇಕು’ ಎಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡ ಹೊನ್ನೂರು ಪ್ರಕಾಶ್ ಆಗ್ರಹಿಸಿದರು.

ಚೆಂಡು ಹೂವು ಕಾರ್ಖಾನೆ ಬಂದ್ ಮಾಡಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಕಾರ್ಖಾನೆಯಿಂದ ರೈತರ ಕೃಷಿ ಜಮೀನುಗಳಿಗೆ ಹಾನಿಯಾಗುತ್ತಿದೆ.  ದ್ರವರೂಪದ ತ್ಯಾಜ್ಯವನ್ನು ಭೂಗರ್ಭಕ್ಕೆ ಸೇರಿಸಲಾಗುತ್ತಿದ್ದು ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಕಾರ್ಖಾನೆಯ ಸುತ್ತಲೂ ಜಮೀನು ಹೊಂದಿರುವ ರೈತರು ಕೊಳವೆ ಬಾವಿ ಕೊರೆಯಿಸಿದರೆ ಶುದ್ಧ ಅಂತರ್ಜಲದ ಬದಲಾಗಿ ದುರ್ವಾಸನೆ ಯುಕ್ತ ನೀರು ಸಿಗುತ್ತಿದೆ. ಮಳೆಗಾಲದಲ್ಲಿ ಹೂವಿನ ಸಂಸ್ಕರಣೆ ಪ್ರಕ್ರಿಯೆಗೆ ಬಳಸಿ ಉಳಿಯುವ ತ್ಯಾಜ್ಯಯುಕ್ತ ನೀರನ್ನು ನೇರವಾಗಿ ಕಾಲುವೆಗಳಿಗೆ ಹರಿಸಲಾಗುತ್ತಿದ್ದು, ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ. ಜಮೀನುಗಳಲ್ಲಿ ಇಳುವರಿ ಕುಸಿತವಾಗಿದೆ. ರೈತರಿಗೆ ತೊಂದರೆ ನೀಡುತ್ತಿರುವ ಕಾರ್ಖಾನೆಯನ್ನು ಕೂಡಲೇ ಮುಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಕಾರ್ಖಾನೆಯ ಅಕ್ಕಪಕ್ಕದ ರೈತರ ಭೂಮಿ ಬರಡಾಗುತ್ತಿದ್ದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಲುಷಿತ ನೀರು ಸೇವಿಸಿ ರೈತರು ಹಾಗೂ ಜಾನುವಾರುಗಳು ರೋಗ ರುಜಿನಗಳಿಗೆ ತುತ್ತಾಗಲಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

ಬಫರ್ ಝೋನ್‌ನಿಂದ ಒಂದು ಕಿ.ಮೀ. ಆಚೆಗೆ ಕಾರ್ಖಾನೆ ನಿರ್ಮಾಣ ಮಾಡಬೇಕು ಎಂಬ ನಿಯಮವಿದ್ದರೂ ಪಾಲನೆಯಾಗಿಲ್ಲ. ದುರ್ವಾಸನೆಗೆ ಕಡಿವಾಣ ಹಾಕುವಂತೆ ರೈತರು ನೀಡಿರುವ ಮನವಿಗೂ ಸ್ಪಂದನೆ ದೊರೆತಿಲ್ಲ. ಜಿಲ್ಲಾಡಳಿತ ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.

 ಬೈಕ್ ರ‍್ಯಾಲಿ: ರೈತರು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಗುಂಡ್ಲುಪೇಟೆ ತಾಲ್ಲೂಕಿನ ಸಿಂಡನಪುರ ಬಳಿಯ ಚೆಂಡು ಹೂವು ಫ್ಯಾಕ್ಟರಿ ಬಳಿ ಸಮಾವೇಶಗೊಂಡ ರೈತ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಜಿಲ್ಲಾಡಳಿತ ಭವನ ತಲುಪಿದರು. ಮಾರ್ಗ ಮಧ್ಯೆ ಅರಣ್ಯ ಇಲಾಖೆ ಕಚೇರಿ ಹಾಗೂ ಸೆಸ್ಕ್‌ ಕಚೇರಿಯ ಬಳಿಯೂ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.   ಜಿಲ್ಲಾಡಳಿತ ಭವನ ತಲುಪಿ ಕಾರ್ಖಾನೆ ಬಂದ್ ಮಾಡಿಸುವಂತೆ ಘೋಷಣೆ ಕೂಗಿದರು.

ರೈತ ಮುಖಂಡರಾದ ಮಾಡ್ರಹಳ್ಳಿ ಪಾಪಣ್ಣ, ಬರಗಿ ಮಹೇಶ್, ಬೆಟ್ಟದ ಮಾದಹಳ್ಳಿ ಷಣ್ಮುಖ, ಬೇರಂಬಾಡಿ ಶಶಿ, ಹೊನ್ನೇಗೌಡನಹಳ್ಳಿ ಗುರು ಹಾಗೂ ಸಿಂಡನಪುರ, ಕೆಲಸೂರು ಪುರ ಭಾಗದ ರೈತರು ಭಾಗವಹಿಸಿದ್ದರು.

- ‘ಸಫಾರಿ ಆರಂಭವಾದರೆ ಮತ್ತೆ ಹೋರಾಟ’ ‌

ರೆಸಾರ್ಟ್‌ ಮಾಲೀಕರು ಪ್ರಭಾವಿಗಳು ಹಾಗೂ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಮರು ಸಫಾರಿ ಆರಂಭಿಸಿದರೆ ರೈತರು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಸಫಾರಿಯಿಂದ ಕಾಡಿನೊಳಗಿರುವ ಪ್ರಾಣಿಗಳು ನಾಡಿನತ್ತ ಮುಖಮಾಡಿದ್ದು ಜನ ಜಾನುವಾರುಗಳನ್ನು ಕೊಂದು ಹಾಕುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ. ಮಾನವ–ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿರುವ ಸಫಾರಿಯನ್ನು ಮರು ಆರಂಭಿಸಿದರೆ ಶಾಸಕರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಜನಪ್ರತಿನಿಧಿಗಳಿಗೆ ಕ್ಷೇತ್ರ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.