ಚಾಮರಾಜನಗರ:ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ, 45 ದಿನಗಳ ಕಾಲ ನಡೆಯಲಿರುವ ಕಾಲುಬಾಯಿ ಜ್ವರಕ್ಕೆ ಲಸಿಕಾ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ತಾಲ್ಲೂಕಿನಹರದನಹಳ್ಳಿ ಬಂಡಿಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹಸುವಿಗೆ ಚುಚ್ಚುಮದ್ದು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಕಾಲುಬಾಯಿ ಜ್ವರ ಹೊಸ ಕಾಯಿಲೆ ಏನಲ್ಲ. ಚಳಿಗಾಲದಲ್ಲಿ ಬರುವ ಈ ಕಾಯಿಲೆ, ಮೊದಲು ಆಡು–ಕುರಿಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. 2011ರಲ್ಲಿ ಮೊದಲ ಬಾರಿಗೆ ಹಸುಗಳಲ್ಲಿ ಕಾಣಿಸಿಕೊಂಡಿತು. ಸಾವಿರಾರು ಹಸುಗಳು ಸತ್ತವು.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ಜಾನುವಾರಿಗೆ ₹14 ಸಾವಿರದಂತೆ ಪರಿಹಾರ ಘೋಷಿಸಿತ್ತು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲು ಆರಂಭಿಸಲಾಯಿತು’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಸದಾಶಿವ ಮೂರ್ತಿ, ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಹೆಚ್.ಎಂ.ಮಹದೇವಶೆಟ್ಟಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ, ಸಹಾಯಕ ನಿರ್ದೇಶಕ ಡಾ.ಸುಗಂದ್ ರಾಜ್, ಡಾ.ಶಿವಣ್ಣ, ಡಾ.ನಟರಾಜ, ಡಾ.ಮೂರ್ತಿ, ಮನೋಹರ್, ಚೇತನ್ ರಾಜ್, ಚಾಮುಲ್ ಅಧಿಕಾರಿಗಳಾದ ಡಾ.ಮುರುಗೇಶ್, ಪ್ರಭುಸ್ವಾಮಿ, ಶ್ಯಾಮಸುಂದರ್, ದಯಾನಂದ್, ಟಿವಿಎಸ್ ವ್ಯವಸ್ಥಾಪಕರಾದ ವಿಶ್ವನಾಥ್, ಹಾಲು ಉತ್ಪಾದಕರ ಸಂಘಗಳ ಅದ್ಯಕ್ಷೆ ಜಯಲಕ್ಷ್ಮಿ, ರಂಗಸ್ವಾಮಿ, ಮುಖ್ಯ ಕಾರ್ಯನಿರ್ವಾಹಕರಾದ ಆರ್.ಕಾವೇರಿ ಶಿವಕುಮಾರ್, ಪಿಎಸಿಸಿ ಅದ್ಯಕ್ಷ ಬಂಗಾರಶೆಟ್ಟಿ, ಮುಖಂಡರಾದ ಜಯಸ್ವಾಮಿ ಸೇರಿದಂತೆ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.