ಕೊಳ್ಳೇಗಾಲ: ಕೋಟ್ಯಂತರ ರೂಪಾಯಿ ಬೆಲೆಬಾಳುವ 15 ಕೆಜಿಗಳಷ್ಟು ತಿಮಿಂಗಿಲ ವಾಂತಿಯನ್ನು ಕೇರಳದಿಂದ ಬೆಂಗಳೂರಿನತ್ತ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ನಾಲ್ವರನ್ನು ನಗರದ ಅರಣ್ಯ ಸಂಚಾರಿ ದಳದ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
ನಗರದ ಹೈಟೆಕ್ ಬಸ್ ನಿಲ್ದಾಣದ ಸಮೀಪದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ, 15 ಕೆಜಿ ತಿಮಿಂಗಿಲದ ವಾಂತಿಯನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾದಪುರಂ ಗ್ರಾಮದ ಸಂಶುದ್ದೀನ್ ಒತಿಯೋತ್ (48), ಕೊಟ್ಟಾಯಂ ಜಿಲ್ಲೆಯ ಚಂಗಸೇರಿ ಗ್ರಾಮದ ತ್ರೆಸೀಮಾ ವರ್ಘೆಸೆ (55), ತ್ರಿಶ್ಶೂರ್ ಜಿಲ್ಲೆಯ ಕಿಲುಪ್ಪಲ್ಲಿಕ್ಕರ ಗ್ರಾಮದ ಸಜಿ ಸುಬಾಸ್ (41) ಹಾಗೂ ತುಮಕೂರಿನ ತಿಪಟೂರು ತಾಲ್ಲೂಕಿನ ವಿರೂಪಾಕ್ಷ (62) ಬಂಧಿತ ಆರೋಪಿಗಳು.
ಬೆಂಗಳೂರಿನ ಕಾಳಸಂತೆಯಲ್ಲಿ ತಿಮಿಂಗಲದ ವಾಂತಿಯನ್ನು ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ವಿಜಯರಾಜು ನೇತೃತ್ವದ ತಂಡ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಕಾರು, ನಾಲ್ಕು ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅರಣ್ಯ ಸಂಚಾರ ದಳದ ಸಿಬ್ಬಂದಿ ಬಸವರಾಜು, ಸ್ವಾಮಿ, ರಾಮಚಂದ್ರ, ಶಂಕರ, ಟಕೀ ಉಲ್ಲಾ, ಪ್ರಭಾಕರ, ಬಸವರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.