ADVERTISEMENT

ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 7:30 IST
Last Updated 2 ಜೂನ್ 2021, 7:30 IST
ಆತ್ಮಹತ್ಯೆ
ಆತ್ಮಹತ್ಯೆ   

ಚಾಮರಾಜನಗರ: ತಾಲ್ಲೂಕಿನ ಎಚ್.ಮೂಕಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಮಹದೇವಪ್ಪ (46), ಅವರ ಪತ್ನಿ ಮಂಗಳಮ್ಮ (40) ವರ್ಷ, ಮಕ್ಕಳಾದ ಜ್ಯೋತಿ (14) ವರ್ಷ, ಶ್ರುತಿ (12) ಮೃತಪಟ್ಟವರು.

ಮಹಾದೇವಪ್ಪ ಅವರಿಗೆ 20 ದಿನಗಳ ಹಿಂದೆ ಕೋವಿಡ್ ದೃಢಪಟ್ಟು, ಚೇತರಿಸಿಕೊಂಡಿದ್ದರು. ಕೋವಿಡ್ ಹಾಗೂ ಲಾಕ್ ಡೌನ್ ಕಾರಣದಿಂದ ಕುಟುಂಬ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿತ್ತು ಎಂದು ತಿಳಿದು ಬಂದಿದೆ.

ADVERTISEMENT

ಕೂಲಿ‌ ಕಾರ್ಮಿಕರಾಗಿದ್ದ ಮಹಾದೇವಪ್ಪ ಅವರಿಗೆ ಒಂದೂವರೆ ಎಕರೆ ಜಮೀನು ಇತ್ತು. ಮಳೆ ಆಶ್ರಿತ ಕೃಷಿ ಮಾಡಿಕೊಂಡಿದ್ದರು.

ಮಹಾದೇವಪ್ಪ ಅವರು ಮಂಗಳವಾರ ನಂಜನಗೂಡು ತಾಲ್ಲೂಕಿನಲ್ಲಿರುವ ಹಿರಿಯ ಮಗಳೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾರೆ. ಗ್ರಾಮದ ಕುಮಾರ್ ಎಂಬುವವರೊಂದಿಗೂ ಮಾತನಾಡಿದ್ದಾರೆ.

ಬುಧವಾರ ಬೆಳಿಗ್ಗೆ ಗ್ರಾಮದವರೊಬ್ಬರು ಕೂಲಿ ಕೆಲಸಕ್ಕೆ ಕರೆಯಲು ಹೋದಾಗ ಬಾಗಿಲು ತೆರೆದಿರಲಿಲ್ಲ. ಮನೆಯಿಂದ ಯಾವುದೇ ಸದ್ದು ಕೇಳದೇ ಇದ್ದಾಗ ಮನೆಯ ಮೇಲೆ ಹತ್ತಿ ಹೆಂಚು ಸರಿಸಿ‌ನೋಡಿದಾಗ ನಾಲ್ವರೂ ನೇಣು ಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ.

ಎಸ್ ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಎಎಸ್ ಪಿ ಅನಿತಾ ಹದ್ದಣ್ಣವರ್, ಡಿವೈಎಸ್ ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದರು.

'ಮೇಲ್ನೋಟಕ್ಕೆ‌ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ‌ ಕಾಣುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನೈಜ ಕಾರಣ ತಿಳಿಯಲಿದೆ' ಎಂದು ಎಸ್ ಪಿ ದಿವ್ಯಾ ಸಾರಾ ಥಾಮಸ್ ಅವರು ಮಾಧ್ಯಮಗಳಿಗೆ ತಿಳಿಸಿದರು.

ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.